ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಬ್ರಿಟಿಷರನ್ನು ದೇಶದಿಂದ ಓಡಿಸಲು ಅಂದು ಕ್ವಿಟ್ ಇಂಡಿಯಾ ಮೂವ್ಮೆಂಟ್ ನಡೆದಿದ್ದರೆ, ಕೋಟೆ ನಾಡಿನ ಪೊಲೀಸರಿಂದು ಫಿಟ್ ಇಂಡಿಯಾ ಮೂವ್ಮೆಂಟ್ ಅನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ವ್ಯಾಯಾಮ, ಯೋಗ, ಧ್ಯಾನ ಹಾಗೂ ಆಟೋಟಗಳ ಮೂಲಕ ದೈಹಿಕ ಸಾಮರ್ಥ್ಯ ಕಾಪಾಡಿಕೊಂಡು ಮನೋಲ್ಲಾಸದಿಂದ ಇರುವಂತೆ ಜನಸಾಮಾನ್ಯರನ್ನು ಪ್ರೇರೇಪಿಸಲು 2019 ಆಗಸ್ಟ್ 29 ರಂದು ಪ್ರಧಾನಿ ನರೇಂದ್ರ ಮೋದಿ ಈ ಆಂದೋಲನಕ್ಕೆ ಚಾಲನೆ ನೀಡಿದ್ದರು. ಚಿತ್ರದುರ್ಗದ ಪೊಲೀಸರು ಕೋವಿಡ್-19 ಮತ್ತಿತರ ರೋಗಗಳಿಂದ ಮುಕ್ತವಾಗಲು ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಈಗ ಫಿಟ್ ಇಂಡಿಯಾ ಮೊರೆ ಹೋಗಿದ್ದಾರೆ.
ಬಿಡುವಿಲ್ಲದ ಕಾರ್ಯದೊತ್ತಡದ ನಡುವೆ, ನಿತ್ಯ ವಾಕಿಂಗ್, ರನ್ನಿಂಗ್, ಟ್ರಕ್ಕಿಂಗ್ ಅಥವಾ ಸೈಕ್ಲಿಂಗ್ನಂಥ ಒಂದಲ್ಲ ಒಂದು ದೈಹಿಕ ಸಾಮರ್ಥ ವೃದ್ಧಿಸುವ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕೋವಿಡ್ ಕಾರಣದಿಂದ ಸದ್ಯ ಒಂದೇ ಗುಂಪಲ್ಲಿ ಸೇರುವ ಬದಲು ನಿರ್ದಿಷ್ಟ ಸಂಖ್ಯೆಯ ತುಕುಡಿ ಮಾಡಿಕೊಂಡಿದ್ದಾರೆ.
ಮಹಿಳೆಯರು ಸೇರಿ 150 ಕ್ಕೂ ಹೆಚ್ಚು ಪೊಲೀಸರು ಎಸ್ಪಿ ಜಿ.ರಾಧಿಕಾ ನೇತೃತ್ವದಲ್ಲಿ ವಾಟ್ಸ್ ಆ್ಯಪ್ ಗ್ರೂಪ್ ರಚಿಸಿಕೊಂಡು ದೈನಂದಿನ ಮಾಹಿತಿ, ಸಲಹೆ, ಸೂಚನೆ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಎಸ್ಪಿ ರಾಧಿಕಾ ಖುದ್ದು ಚಟುವಟಿಕೆಗಳಲ್ಲಿ ಪಾಲ್ಗೊಂಡು ಸದಸ್ಯರೆಲ್ಲ ಸಕ್ರಿಯವಾಗಿ ಭಾಗವಹಿಸುವಂತೆ ನಿಗಾ ವಹಿಸುತ್ತಿದ್ದಾರೆ.
ಎಸ್ಪಿ, ಎಎಸ್ಪಿ ಸೇರಿ ಅನೇಕ ಹಿರಿಯ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕಳೆದ ಮೂರು ತಿಂಗಳಿಂದ ವಾರದಲ್ಲಿ ಎರಡು ದಿನ ಕನಿಷ್ಠ 20 ರಿಂದ 30 ಕಿ.ಮೀ. ಸೈಕ್ಲಿಂಗ್ ಮಾಡುತ್ತಿದ್ದಾರೆ. ವಾರದ ಕವಾಯತು ಜತೆಗೆ ವಾಕಿಂಗ್, ಟ್ರಕ್ಕಿಂಗ್ ಸಾಮಾನ್ಯವಾಗುತ್ತಿದೆ.
ಕಳೆದ ತಿಂಗಳು ಬೆಳಗಾವಿಯ ಸಿಆರ್ಪಿಎಫ್ ಪೊಲೀಸರು ಬೆಂಗಳೂರಿಗೆ ಫಿಟ್ ಇಂಡಿಯಾ ಆಂದೋಲನ ಓಟ ನಡೆಸಿದ್ದು, ಚಿತ್ರದುರ್ಗದ ಮೂಲಕ ಹಾದುಹೋಗಿದ್ದರು. ಇದು ಸ್ಥಳೀಯರ ಉತ್ಸಾಹವನ್ನು ಹೆಚ್ಚಿಸಿದೆ.
30 ಕಿ.ಮೀ. ಸೈಕ್ಲಿಂಗ್
ಡಿಸಿ ಕಚೇರಿಯಿಂದ ಸೋಮವಾರ ಮುಂಜಾನೆ ಎಸ್ಪಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ 2.46 ಗಂ. ಕಾಲಾವಧಿಯಲ್ಲಿ 33.16 ಕಿಮೀ ದೂರವನ್ನು ಸೈಕಲ್ ಮೂಲಕ ಕ್ರಮಿಸಿದ್ದಾರೆ. ಡಿಸಿ ಕಚೇರಿಯಿಂದ ಆರಂಭವಾದ ಸೈಕ್ಲಿಂಗ್, ಚಳ್ಳಕೆರೆ ಗೇಟ್, ಕ್ಯಾದಿಗೆರೆ, ಗುಡ್ಡದರಂಗವ್ವನಹಳ್ಳಿ, ತಮಟಕಲ್ ರಸ್ತೆ ಮಾರ್ಗದಲ್ಲಿ ಸಾಗಿ ಮರಳಿ ಡಿಸಿ ಸರ್ಕಲ್ಗೆ ತಲುಪಿದೆ.