ದೊಡ್ಡಬಳ್ಳಾಪುರ: ನಗರದ ಬಸವ ಭವನದಿಂದ ಇಸ್ಲಾಂಪುರದವರೆಗಿನ ರಸ್ತೆಯನ್ನು ಕೆಲದಿನಗಳ ಹಿಂದೆ 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆದರೆ, ಕೇವಲ 15 ದಿನಗಳಲ್ಲಿ ರಸ್ತೆ ಸಂಪೂರ್ಣ ಕಿತ್ತುಬಂದಿದೆ ಎಂದು ತಾಪಂ ಸದಸ್ಯರು ಆರೋಪಿಸಿದರು.
ತಾಲೂಕು ಪಂಚಾಯಿಯಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಸದಸ್ಯರು, ಕಾಮಗಾರಿ ಗುಣಮಟ್ಟವನ್ನು ತಜ್ಞರಿಂದ ಪರಿಶೀಲನೆ ನಡೆಸಬೇಕು ಎಂದು ತಾಪಂ ಅಧ್ಯಕ್ಷೆ ರತ್ನಮ್ಮಜಯರಾಂ ಅವರನ್ನು ಆಗ್ರಹಿಸಿದರು.
ಅಂದಾಜು ಎರಡು ವರ್ಷಗಳಿಂದಲೂ ರಸ್ತೆ ಕಾಮಗಾರಿ ನಡೆಯುತ್ತಿದೆ. ಆದರೂ ಇದುವರೆಗೂ ಪೂರ್ಣಗೊಂಡಿಲ್ಲ. ರಸ್ತೆ ಬದಿಗಳಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಲಾಗಿದೆ. ಸಣ್ಣ ಮಳೆಯಾದರೂ ನೀರು ಚರಂಡಿಗಳಲ್ಲಿ ಹರಿಯುವ ಬದಲು ರಸ್ತೆಯಲ್ಲೇ ಸಂಗ್ರಹಗೊಂಡು ವಾಹನ ಸವಾರರಿಗೆ ಕಿರಿಇರಿಯಾಗುತ್ತಿದೆ ಎಂದು ಸದಸ್ಯ ಡಿ.ಸಿ. ಶಶಿಧರ್ ಆಕ್ರೋಶ ವ್ಯಕ್ತಪಡಿಸಿದರು.
ಮಳೆನೀರು ರಸ್ತೆಯಲ್ಲೇ ಹರಿಯುವುದರಿಂದ, ರಸ್ತೆ ಹೆಚ್ಚುಕಾಲ ಬಾಳಿಕೆ ಬರಲು ಸಾಧ್ಯವಿಲ್ಲ. ಹಾಗಾಗಿ, ಗುತ್ತಿಗೆದಾರರಿಗೆ ಅಂತಿಮ ಬಿಲ್ ಪಾವತಿ ಮಾಡುವ ಮೊದಲು ಕಾಮಗಾರಿ ಗುಣಮಟ್ಟ ಪರಿಶೀಲಿಸುವಂತೆ ಆಗ್ರಹಿಸಿದರು.
ಒಣಮರಗಳನ್ನು ತೆರವುಗೊಳಿಸಿ: ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ರಸ್ತೆಯ ಬದಿಯಲ್ಲಿ ಹಲವು ಸಾಲು ಮರಗಳು ಒಣಗಿವೆ. ಜೋರಾಗಿ ಮಳೆ-ಗಾಳಿ ಬಂದಾಗ ಅವುಗಳ ರಂಬೆ ಮುರಿದು ಬೀಳುತ್ತಿದ್ದು, ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿವೆ. ಆದ್ದರಿಂದ, ಇವನ್ನು ಪರಿಶೀಲಿಸಿ, ತೆರವುಗೊಳಿಸಲು ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಸದಸ್ಯ ಸುನಿಲ್ ಕುಮಾರ್ ಒತ್ತಾಯಿಸಿದರು.