ಮಂಗಳೂರು: ಗಾಂಜಾ ಮಾರಾಟ ಮಾಡಿದ ಪ್ರಕರಣದ ಅಪರಾಧಿ ಕುದ್ರೋಳಿಯ ಇಬ್ರಾಹಿಂ ಕೆ.(39) ಎಂಬಾತನಿಗೆ ಮಂಗಳೂರಿನ ಮೂರನೇ ಜೆಎಂಎಫ್ಸಿ ನ್ಯಾಯಾಲಯ 6 ತಿಂಗಳು ಕಠಿಣ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದರೆ ಒಂದು ತಿಂಗಳು ಹೆಚ್ಚುವರಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
2018ರ ಫೆ.14ರಂದು ಇಬ್ರಾಹಿಂ ಸ್ಕೂಟರ್ನಲ್ಲಿ ಗಾಂಜಾವನ್ನಿಟ್ಟು ಕುಂಟಿಕಾನ ಜಂಕ್ಷನ್ ಪ್ಲೈಓವರ್ ಕೆಳಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದರು. ಆತನ ಬಳಿ 50 ಗ್ರಾಂ ಗಾಂಜಾ ಪತ್ತೆಯಾಗಿತ್ತು. ಅಂದಿನ ಉರ್ವ ಠಾಣಾ ನಿರೀಕ್ಷಕರಾಗಿದ್ದ ರವೀಶ್ ನಾಯ್ಕ ಪ್ರಕರಣ ದಾಖಲಿಸಿದ್ದು, ಎಸ್ಐ ವನಜಾಕ್ಷಿ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶೆ ತಾರಾ ಕೆ.ಸಿ. ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ನೇತ್ರಾವತಿ ವಾದಿಸಿದ್ದರು.