ಗುಂಡ್ಲುಪೇಟೆ: ತಾಲೂಕಿನ ಹಂಗಳ ಭಾಗದಲ್ಲಿ ದಾಂಧಲೆ ನಡೆಸುತ್ತಿದ್ದ ಪುಂಡಾನೆ ಎಲ್ಲಿಯೂ ಕಾಣದಿರುವುದರಿಂದ ಅರಣ್ಯ ಇಲಾಖೆ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.
ಹಲವು ದಿನಗಳಿಂದ ಹಂಗಳ ಸಮೀಪದ ಹಿರೀಕೆರೆ, ಹುಂಡೀಪುರ, ಮಗುವಿನಹಳ್ಳಿ ಮುಂತಾದ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪುಂಡಾನೆ ಮಂಗಳವಾರ ಸಂಜೆಯಿಂದ ಕಣ್ಣಿಗೆ ಬಿದ್ದಿಲ್ಲ. ಅಲ್ಲದೆ ಹಾಸನದಲ್ಲಿ ಪುಂಡಾನೆ ದಾಳಿಗೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದರಿಂದ ಮತ್ತಿಗೋಡು ಶಿಬಿರದ ಆನೆಗಳಾದ ಮಹೇಂದ್ರ, ಭೀಮ, ಅಶ್ವತ್ಥಾಮನನ್ನು ಬುಧವಾರ ರಾತ್ರಿಯೇ ಅಲ್ಲಿಗೆ ಕರೆದೊಯ್ಯಲಾಗಿದ್ದು ಗುರುವಾರ ರಾತ್ರಿ ವಾಪಸಾಗಲಿವೆ.
ಸದ್ಯ ಬಂಡೀಪುರದ ರಾಂಪುರ ಸಾಕಾನೆ ಶಿಬಿರದ ಗಣೇಶ, ರೋಹಿತ್ ಹಾಗೂ ಪಾರ್ಥಸಾರತಿ ಆನೆಗಳು ಮಾತ್ರ ಗೋಪಾಲಸ್ವಾಮಿಬೆಟ್ಟ ವಲಯಾರಣ್ಯ ಕಚೇರಿಯ ಕ್ಯಾಂಪಸ್ನಲ್ಲಿ ಇರಿಸಿಕೊಳ್ಳಲಾಗಿದೆ. ಈ ಹಿಂದೆ ಪುಂಡಾನೆ ಓಡಾಡುತ್ತಿದ್ದ ಪ್ರದೇಶಗಳಲ್ಲಿ ಕ್ಯಾಮರಾ ಅಳವಡಿಸಿ ಚಲನವಲನ ಗಮನಿಸಲಾಗುವುದು. ಮತ್ತೆ ಆನೆ ಇತ್ತ ಬಂದರೆ ಕೂಡಲೇ ಸೆರೆ ಕಾರ್ಯಾಚರಣೆಗೆ ಆರಂಭಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
.