More

    ಮತದಾರರ ಕರಡು ಪಟ್ಟಿ ಪ್ರಕಟ; ಡಿ.9 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

    ಬಳ್ಳಾರಿ :
    ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ-2024 ಸಂಬಂಧಿಸಿದಂತೆ ನ.23ರಂದು ಮತದಾರರ ಕರಡು ಪಟ್ಟಿಯನ್ನು ಪ್ರಚುರಪಡಿಸಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿ.9ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ ಹೇಳಿದರು.

    ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ-2024 ಸಂಬಂಧಿಸಿದಂತೆ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಜಿಲ್ಲೆಯಲ್ಲಿ 17,737 ಅರ್ಜಿಗಳು ಸ್ವೀಕೃತಗೊಂಡಿದ್ದು, ಈ ಪೈಕಿ 11,061 ಪುರುಷರು ಹಾಗೂ 6,658 ಮಹಿಳೆಯರು ಮತ್ತು ಇತರ 4 ಅರ್ಜಿಗಳು ಸ್ವೀಕೃತವಾಗಿವೆ. ಕರಡು ಮತದಾರರ ಪಟ್ಟಿ ಅನ್ವಯ 17,723 ಅರ್ಜಿಗಳು ಸರಿಯಾಗಿವೆ. 14 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ತಿಳಿಸಿದರು.

    ಚುನಾವಣಾ ಆಯೋಗ ನಿಗದಿಪಡಿಸಿದಂತೆ, 2020ರ ನ.1 ಕ್ಕಿಂತ ಮುಂಚಿತವಾಗಿ ಪದವೀಧರರು ಆಗಿರಬೇಕು, ಆದರೆ ಈ ತಿರಸ್ಕೃತ ಪ್ರಕರಣಗಳಲ್ಲಿ 2020ರ ನ.1 ನಂತರ ಪದವಿ ಪೂರ್ಣಗೊಳಿಸಿದ ಕಾರಣ ಮತ್ತು ಆಯೋಗ ನಿಗದಿಪಡಿಸಿದ ವಿದ್ಯಾರ್ಹತೆ ಇಲ್ಲದೆ ಇರುವುದರಿಂದ ತಿರಸ್ಕರಿಸಲಾಗಿದೆ ಎಂದು ವಿವರಿಸಿದರು.

    ಅರ್ಜಿದಾರರು ಕರಡು ಮತದಾರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಡಿ.9 ರವರೆಗೆ ಅವಕಾಶ ಕಲ್ಪಿಸಲಾಗಿದೆ. ತಮ್ಮ ಆಕ್ಷೇಪಣೆಗಳೇನಾದರು ಇದ್ದಲ್ಲಿ ಸಾರ್ವಜನಿಕರು ತಮ್ಮ ವ್ಯಾಪ್ತಿಯ ಮತದಾರ ನೋಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿಯನ್ನು ಡಿ.30ರಂದು ಪ್ರಕಟಿಸಲಾಗುವುದು ಎಂದು ಹೇಳಿದರು.

    ಕಳೆದ ವರ್ಷದಲ್ಲಿ ಒಟ್ಟು 11 ಸಾವಿರ ಮತದಾರರಿದ್ದರು. ಈ ಬಾರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ವತಿಯಿಂದ ಸೂಕ್ತ ಕ್ರಮ, ಸ್ವೀಪ್ ಚಟುವಟಿಕೆ ಹಾಗೂ ಸಮೂಹ ಮಾಧ್ಯಮಗಳ ಮೂಲಕದ ಜಾಗೃತಿಯಿಂದಾಗಿ ಮತದಾರರ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇನ್ನು ಅರ್ಜಿ ಸಲ್ಲಿಸದೆ ಇರುವವರು ಚುನಾವಣಾ ಆಯೋಗದ ಅಧಿಸೂಚನೆಯಲ್ಲಿ ನಿಗದಿಪಡಿಸಿದಂತೆ 2024ರ ಜ.1ರಿಂದ ನಾಮಪತ್ರ ಸಲ್ಲಿಸುವ ಕೊನೆಯ ದಿನದವರೆಗೂ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು. ಈ ವೇಳೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts