ಕೆಜಿಎಫ್: ಭಾರತ್ ಗೋಲ್ಡ್ ಮೈನ್ಸ್ ಎಂಪ್ಲಾಯಿಸ್ ಇಂಡ್ರಸ್ಟ್ರೀಯಲ್ ಕೋ-ಆಪರೇಟಿವ್ ಸೊಸೈಟಿ, ಭಾರತ್ ಚಿನ್ನದ ಗಣಿ ನೌಕರರ ಕೈಗಾರಿಕೆ ಸಹಕಾರ ಸಂಘ ಹಾಗೂ ಬಿಜಿಎಂಎಲ್ ನೌಕರರ ಮೇಲ್ವಿಚಾರಕರು ಮತ್ತು ಅಧಿಕಾರಿಗಳ ಸಹಕಾರ ಸಂಘಗಳು ನಿವೃತ್ತ ಬಿಜಿಎಂಎಲ್ ಕಾರ್ಮಿಕರನ್ನು ದಿಕ್ಕುತಪ್ಪಿಸುತ್ತಿವೆ. ನಮಗೆ ಬರಬೇಕಾದ ಬಾಕಿ ಹಣವನ್ನು ಕಾರ್ಮಿಕರಿಗೆ ತಲುಪದಂತೆ ಅಡ್ಡಿಪಡಿಸುತ್ತಿದ್ದಾರೆ. ಹೀಗಾಗಿ ಈ ಮೂರು ಸೊಸೈಟಿಗಳನ್ನು ರದ್ದುಪಡಿಸುವಂತೆ ಆಗ್ರಹಪಡಿಸಿ ಬಿಜಿಎಂಎಲ್ ನಿವೃತ್ತ ನೌಕರರ ಸಂದ ವತಿಯಿಂದ ಶನಿವಾರ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ತಾಲೂಕು ಶಿರಸ್ತೇದಾರ ಸುರೇಶ್ ಅವರಿಗೆ ಮನವಿ ಸಲ್ಲಿಸಿದರು.
ಭಾರತ್ ಗೋಲ್ಡ್ ಮೈನ್ಸ್ ನಿವೃತ್ತ ನೌಕರರ ಸಂದ ಅಧ್ಯಕ್ಷ ಮೂರ್ತಿ ಮಾತನಾಡಿ, ಬಿಜಿಎಂಎಲ್ ಕಾರ್ಖಾನೆಯಲ್ಲಿ ಎಸ್ಟಿಬಿಪಿಡಿಯಲ್ಲಿ ಕಾರ್ಮಿಕರು 3,700 ಕಾರ್ಮಿಕರು ಇದ್ದು 2,880 ಕಾರ್ಮಿಕರು ಗ್ಲೋಬಲ್ ಗೋಲ್ಡ್ ಮೈನ್ಸ್ ಇಂಡ್ರಸ್ಟ್ರೀಯಿಲ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಸದಸ್ಯರಾಗಿದ್ದರು. ಕೇಂದ್ರ ಗಣಿ ಇಲಾಖೆ ಸೊಸೈಟಿ ಮೂಲಕ ಬಿಜಿಎಂಎಲ್ ಗಣಿ ಕಂಪನಿ ಮುನ್ನಡೆಸುವುದಾಗಿ ತಿಳಿಸಿತ್ತು ಅನ್ಬಳಗನ್ ಸೇರಿದಂತೆ ದಿವಾಕರ್, ಜಯಕುಮಾರ ಹಾಗೂ ಇತರರು ಸೊಸೈಟಿಗಳನ್ನು ಆರಂಭಿಸಿ ಸೊಸೈಟಿಗಳನ್ನೇ ಒಡೆದು ಆಳಿದರು. ನೂತನವಾಗಿ ಆರಂಭವಾಗಿರುವ ಈ ಸೊಸೈಟಿಗಳಲ್ಲೂ ಕಾರ್ಮಿಕರನ್ನು ಸದಸ್ಯರನ್ನಾಗಿ ನೇಮಕಗೊಳಿಸಿದರು ಮತ್ತು ಹೊಸ ಹೊಸ ಖಾಸಗಿ ಗಣಿ ಕಂಪನಿಗಳೊಂದಿಗೆ ಒಳಒಪ್ಪಂದವನ್ನು ಮಾಡಿಕೊಂಡು ಹಣ ಸಂಪಾದನೆ ಮಾಡಿದರು ಆದ್ದರಿಂದ ಬಿಜಿಎಂಎಲ್ ಕಾರ್ಮಿಕರು ಬೀದಿಗೆ ಬೀಳುವ ಪರಿಸ್ಥಿತಿ ಬಂತು.
ಬಿಜಿಎಂಎಲ್ ಕಾರ್ಖಾನೆಗೆ ಬೀಗ ಜಡಿದು 22 ವರ್ಷ ಕಳೆದಿದ್ದು ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ ಬಿಜಿಎಂಎಲ್ ಕಾರ್ಮಿಕರ ಸಮಸ್ಯೆಗಳು ಬಗೆಹರಿಯಬೇಕಾದರೆ ಎಲ್ಲ ಸೊಸೈಟಿಗಳನ್ನು ರದ್ದುಪಡಿಸಬೇಕು ಮತ್ತು ಅವರಿಗೆ ಬೆಂಬಲವಾಗಿ ನಿಂತಿರುವ ಅಧಿಕಾರ ವರ್ಗವನ್ನು ಕಾನೂನುಬದ್ಧವಾಗಿ ತನಿಖೆ ನಡೆಸಿ ಸೂಕ್ತವಾದ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.