ಮಂಗಳೂರು: ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ 55 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಪೋಕ್ಸೊ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
ಕೆಮ್ರಾಲ್ ಮುಲ್ಯೊಟ್ಟು ನಿವಾಸಿ ದಿನೇಶ್ ಶೆಟ್ಟಿ (41) ಶಿಕ್ಷೆಗೊಳಗಾದ ಅಪರಾಧಿ.
ಪ್ರಕರಣದ ಹಿನ್ನೆಲೆ: ದಿನೇಶ್ ಶೆಟ್ಟಿ ತನ್ನ ಪರಿಚಯದ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ 2018ರ ಡಿ.23ರ ರಾತ್ರಿ ಮತ್ತು 2019ರ ಜ.6ರಂದು ಮಧ್ಯಾಹ್ನ ಅತ್ಯಾಚಾರವೆಸಗಿದ್ದ. ಇದಾದ ಎರಡು ತಿಂಗಳ ಬಳಿಕ ಯುವತಿ ಅಸೌಖ್ಯಕ್ಕೀಡಾಗಿದ್ದು, ಪಾಲಕರ ಜತೆ ವೈದ್ಯರ ಬಳಿ ತೆರಳಿ ತಪಾಸಣೆ ನಡೆಸಿದಾಗ ಗರ್ಭಿಣಿಯಾಗಿರುವ ವಿಷಯ ತಿಳಿದು ಬಂದಿತ್ತು. ಪಾಲಕರು ಬಾಲಕಿಯನ್ನು ಈ ಬಗ್ಗೆ ವಿಚಾರಿಸಿದಾಗ ದಿನೇಶ್ ಶೆಟ್ಟಿ ಅತ್ಯಾಚಾರಗೈದಿರುವ ವಿಷಯ ಬಯಲಿಗೆ ಬಂದಿತ್ತು.
ಅಪ್ರಾಪ್ತೆ ನೀಡಿದ ದೂರಿನ ಆಧಾರದಲ್ಲಿ ಮೂಲ್ಕಿ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿ ದಿನೇಶ್ ಶೆಟ್ಟಿಯನ್ನು ಬಂಧಿಸಲಾಗಿತ್ತು. ಮಗುವಿನ ಡಿಎನ್ಎ ಪರೀಕ್ಷೆಯಲ್ಲೂ ಆರೋಪ ದೃಢಪಟ್ಟಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸೊ ನ್ಯಾಯಾಲಯ ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ಅವರು ಪ್ರಕರಣ ಸಮಗ್ರ ವಿಚಾರಣೆ ನಡೆಸಿದ ಬಳಿಕ ಆರೋಪ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 15ಮಂದಿ ಸಾಕ್ಷಿ ಹೇಳಿದ್ದು, 12 ದಾಖಲೆಗಳನ್ನು ಪರಿಗಣಿಸಲಾಗಿದೆ.
ಅಪರಾಧಿಗೆ ಐಪಿಸಿ 376 ಕಾಯ್ದೆಯಡಿ 7 ವರ್ಷ ಕಠಿಣ ಸಜೆ, 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ತಿಂಗಳ ಕಠಿಣ ಸಜೆ,ಪೋಕ್ಸೊ ಕಾಯ್ದೆಯಡಿ 10 ವರ್ಷ ಕಠಿಣ ಸಜೆ ಮತ್ತು 50 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ 2 ತಿಂಗಳು ಕಠಿಣ ಸಜೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಆತ 2 ವರ್ಷ ನ್ಯಾಯಾಂಗ ಬಂಧನದಲ್ಲಿದ್ದು, ಈ ಅವಧಿ ಶಿಕ್ಷೆಯಲ್ಲಿ ಕಡಿತಗೊಳ್ಳಲಿದೆ. ಅಪರಾಧಿ ಶಿಕ್ಷೆಯನ್ನು ಏಕಕಾಲಕ್ಕೆ ಅನುಭವಿಸಬಹುದಾಗಿದೆ. ದಂಡದ ಮೊತ್ತದಲ್ಲಿ 45 ಸಾವಿರ ರೂ. ನೊಂದ ಬಾಲಕಿಗೆ ನೀಡಬೇಕು ಹಾಗೂ ಬಾಲಕಿ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆಯಲು ಅರ್ಹರು ಎಂದು ಆದೇಶಿಸಲಾಗಿದೆ.
ಎರಡು ಮಕ್ಕಳ ತಂದೆ: ಶಿಕ್ಷೆಗೊಳಗಾದ ಅಪರಾಧಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಈತನಿಗೆ ಮದುವೆಯಾಗಿ, ಇಬ್ಬರು ಮಕ್ಕಳು ಕೂಡ ಇದ್ದಾರೆ. ಮೂಲ್ಕಿ ಅಂದಿನ ಇನ್ಸ್ಪೆಕ್ಟರ್ ಪಿ.ಎಂ. ಸಿದ್ಧರಾಜು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ವೆಂಕಟರಮಣಸ್ವಾಮಿ ವಾದಿಸಿದ್ದರು.