ಹುಬ್ಬಳ್ಳಿ : ನಗರದ ಕಾರವಾರ ರಸ್ತೆಯಲ್ಲಿರುವ ಕಸ ವಿಲೇವಾರಿ ಘಟಕ (ಹೇಸಿಗೆಮಡ್ಡಿ)ದಿಂದಾಗಿ ಸುತ್ತಲಿನ ನಿವಾಸಿಗಳು ತೊಂದರೆ ಎದುರಿಸುತ್ತಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಮಾ. 4ರಂದು ಬೆಳಗ್ಗೆ 11 ಗಂಟೆಗೆ ಗಾರ್ಬೆಜ್ ಯಾರ್ಡ್ಗೆ ಬರುವ ವಾಹನಗಳನ್ನು ತಡೆದು, ಪ್ರತಿಭಟನೆ ನಡೆಸಲಾಗುವುದು ಎಂದು ಹೇಸಿಗೆಮಡ್ಡಿ (ಗಾರ್ಬೆಜ್ ಯಾರ್ಡ್) ತೆರವು ಹೋರಾಟ ಸಮಿತಿ ಅಧ್ಯಕ್ಷ ನಾಗರಾಜ ಗೌರಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 21 ಎಕರೆ ವ್ಯಾಪ್ತಿ ಹೊಂದಿರುವ ಕಾರವಾರ ರಸ್ತೆಯ ಗಾರ್ಬೆಜ್ ಯಾರ್ಡ್ ಸುತ್ತಲೂ ಕಂಪೌಂಡ್ ಇಲ್ಲ. ಇದರಿಂದಾಗಿ ಬೀದಿ ನಾಯಿಗಳು ರಾತ್ರಿ ಸಮಯದಲ್ಲಿ ಇಲ್ಲಿನ ಕಸವನ್ನು ಬಾಯಿಯಲ್ಲಿ ಹಿಡಿದು ರಸ್ತೆ ಹಾಗೂ ಮನೆಗಳ ಎದುರು ಎಸೆಯುತ್ತಿವೆ. ಇಲ್ಲಿನ ಕಸ ಗಾಳಿಗೆ ಹಾರಿಕೊಂಡು ಸುತ್ತಲಿನ ಪ್ರದೇಶದಲ್ಲಿ ಬೀಳುತ್ತಿದೆ. ಇದರಿಂದ ಎಲ್ಲೆಂದರಲ್ಲಿ ಕಸ ಬೀಳುತ್ತಿದೆ. ಆರೋಗ್ಯ ಸಮಸ್ಯೆಯೂ ಎದುರಾಗುತ್ತಿದೆ ಎಂದು ದೂರಿದರು.
ಗಾರ್ಬೆಜ್ ಯಾರ್ಡ್ನ ಕಸಕ್ಕೆ ಬೆಂಕಿ ಹತ್ತಿದಾಗ ಅದರ ಹೊಗೆ ಸುತ್ತಲಿನ 7-8 ಕಿಮೀ ದೂರದವರೆಗೆ ಆವರಿಸುತ್ತಿದೆ. ಮಕ್ಕಳು, ಗರ್ಭಿಣಿಯರು, ವೃದ್ಧರು ಅಸ್ತಮಾ ಸೇರಿದಂತೆ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದರು.
ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಗಾರ್ಬೆಜ್ ಯಾರ್ಡ್ ಎದುರು ನಿರಂತರ ಪ್ರತಿಭಟನೆ ನಡೆಸಲಾಗುವುದು. ಮಹಾನಗರ ಪಾಲಿಕೆ ಮುಖ್ಯ ಕಚೇರಿ ಆವರಣದಲ್ಲಿಯೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಗೌರಿ, ಶಿವಕುಮಾರ ಗೋಕಾವಿ, ಖಾಜಾಹುಸೇನ್ ಶಿರೂರ ಉದ್ದಿಗೋಷ್ಠಿಯಲ್ಲಿ ಇದ್ದರು.