ಕಾರವಾರ: ಶಿರೂರು ಟೋಲ್ಗೇಟ್ನಲ್ಲಿ ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಮೃತರಾದವರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟೋಲ್ ವಸೂಲಿ ಮಾಡುತ್ತಿರುವ ಐಆರ್ಬಿ ಕಂಪನಿಯ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ. ಇದರಿಂದ ಕಂಪನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಘೋಷಣೆ ಕೂಗಿದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಶಿರೂರು ಟೋಲ್ ಗೇಟ್ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಹೊನ್ನಾವರದ ಹಾಡಗೇರಿ ನಿವಾಸಿ ಮಂಜುನಾಥ ಸತ್ಯನಾರಾಯಣ ನಾಯ್ಕ, ಲೋಕೇಶ ಮಾದೇವ ನಾಯ್ಕ ಹಾಗೂ ಜ್ಯೋತಿ ದಂಪತಿ, ಬಳಕೂರು ನಿವಾಸಿ ಗಜಾನನ ನಾಯ್ಕ ಅವರ ಕುಟುಂಬಗಳಿಗೆ ಸರ್ಕಾರ ತಲಾ 30 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದೆ ಇರುವುದು ಇಂಥ ಅಪಘಾತಗಳಿಗೆ ಕಾರಣವಾಗಿದ್ದು, ಜಿಲ್ಲೆಯಲ್ಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಬೇಕು ಎಂದು ಮನವಿ ಮಾಡಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ ಹರಿಕಾಂತ, ಕಾರ್ಯದರ್ಶಿ ರಮೇಶ ರೆಡ್ಡಿ, ಉಪಾಧ್ಯಕ್ಷ ನೀಲಕಂಠ ನಾಯ್ಕ, ಜಿಲ್ಲಾ ಗೌರವ ಅಧ್ಯಕ್ಷ ಶ್ರೀಧರ ಮಡಿವಾಳ, ಮಹಿಳಾ ಅಧ್ಯಕ್ಷೆ ವೀಣಾ ಹೆಗಡೆ, ಹೊನ್ನಾವರ ತಾಲೂಕು ಅಧ್ಯಕ್ಷ ಗಣೇಶ ನಾಯ್ಕ, ಕುಮಟಾ ತಾಲೂಕು ಅಧ್ಯಕ್ಷ ರಾಜೇಶ ಮಡಿವಾಳ, ಶಿರಸಿ ತಾಲೂಕು ಅಧ್ಯಕ್ಷ ನಾಗರಾಜ ಗೌಡ, ಹಳಿಯಾಳ ತಾಲೂಕು ಅಧ್ಯಕ್ಷ ಚಂದ್ರು ದೊಡ್ಮನಿ ಇದ್ದರು.