ಬೆಂಗಳೂರು: ಮೊಳಕಾಲ್ಮೂರು ಕ್ಷೇತ್ರದಲ್ಲಿ ಯೋಗೀಶ್ ಬಾಬುಗೆ ಟಿಕೆಟ್ ನೀಡಬೇಕು, ಬಿಜೆಪಿಯಿಂದ ಆಗಮಿಸಿದ ಎನ್.ವೈ. ಗೋಪಾಲಕೃಷ್ಣಗೆ ಸ್ಪರ್ಧಿಸಲು ಟಿಕೆಟ್ ಕೊಡಬಾರದೆಂದು ಆಗ್ರಹಿಸಿ ತರೀಕೆರೆ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಕಾರ್ಯಕರ್ತರು ಧರಣಿ ನಡೆಸಿದ್ದಾರೆ. ಕಾರ್ಯಕರ್ತರು ವಿಷದ ಬಾಟಲ್ನೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ಹೋರಾಟದ ಹಿನ್ನೆಲೆ ಕೆಪಿಸಿಸಿ ಕಚೇರಿ ಮುಂಭಾಗ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕೆಪಿಸಿಸಿ ಕಚೇರಿಗೆ ಆಗಮಿಸಿ ಪ್ರತಿಭಟನಾ ನಿರತರನ್ನು ಮನವೋಲಿಸಿದ್ದಾರೆ. ಆದರೆ ಕಾರ್ಯಕರ್ತರು ಮಾತ್ರ ಪ್ರತಿಭಟನೆ ಮುಂದುವರೆಸಿದ್ದು, ನಾಯಕರಿಬ್ಬರ ಮನವೋಲಿಕೆ ಪ್ರಯತ್ನ ವಿಫಲವಾಗಿದೆ. ಸದ್ಯ ಪೊಲೀಸರು ಪ್ರತಿಭಟನಾ ನಿರತರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಸ್ಟೇರಿಂಗ್ ಲಾಕ್; ಕಬ್ಬಿನ ಗದ್ದೆಗೆ ನುಗ್ಗಿದ ಕೆಎಸ್ಆರ್ಟಿಸಿ ಬಸ್
“ಕೊಡ್ಬೇಕಪ್ಪ ಕೊಡ್ಬೇಕು… ಯೋಗೇಶ್ ಬಾಬುಗೆ ಟಿಕೆಟ್ ಕೊಡ್ಬೇಕು” ಎಂದು ಪ್ರತಿಭಟನಾ ನಿರತ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಒಂದು ವೇಳೆ ಯೊಗೇಶ್ ಬಾಬುಗೆ ಟಿಕೆಟ್ ಕೊಡಲಿಲ್ಲ ಅಂದರೆ, ನಾವು ಕಾಂಗ್ರೆಸ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇವೆ ಎಂದು ಯೋಗೇಶ್ ಬಾಬು ಅಭಿಮಾನಿಗಳು ಹೇಳಿದ್ದಾರೆ.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿಗೆ ಯೋಗೇಶ್ ಬಾಬು ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ. ಸಿದ್ದರಾಮಯ್ಯ ಮುಂದೆ ಬಾಬು… ಬಾಬು… ಎಂದು ಧ್ವನಿಗೂಡಿಸಿದ್ದಾರೆ. ನೀವು ಯೋಗೇಶ್ ಬಾಬುಗೆ ಟಿಕೆಟ್ ಕೊಡಬೇಕೆಂದು ಘೋಷಣೆ ಕೂಗಿ ಸಿದ್ದರಾಮಯ್ಯ ಅವರಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಹಾಸನ ಹೊರತುಪಡಿಸಿ ಉಳಿದ ಕ್ಷೇತ್ರದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇವೆ; ಎಚ್ಡಿಕೆ
ಕಾಂಗ್ರೆಸ್ ಕಚೇರಿ ಮುಂದಿನ ಪ್ರತಿಭಟನೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿ, ನಾವು ಯಾರಿಗೂ ಮೋಸ ಮಾಡಿಲ್ಲ. ಪಕ್ಷದ ಬಿಲ್ಡಿಂಗ್ ಕಟ್ಟಲು ಅರ್ಜಿಯಲ್ಲಿ ಹಣ ಕಟ್ಟಿದ್ದಾರೆ. ಪಕ್ಷದ ಕಚೇರಿ ದೇವಸ್ಥಾನ ಇದ್ದ ಹಾಗೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಯಬೇಕು. ಅಧಿಕಾರಕ್ಕೆ ಬರುತ್ತೇವೆ ಎಂದು ಟಿಕೆಟ್ಗೆ ಡಿಮ್ಯಾಂಡ್ ಮಡುತ್ತಿದ್ದಾರೆ. ಪ್ರತಿಭಟನೆ ಎಲ್ಲ ಸಹಜವಾಗಿ ನಡೆಯುತ್ತವೆ ಎಂದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಎನ್ವೈ ಗೋಪಾಲಕೃಷ್ಣ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಕೆಶಿ ಮಾತನಾಡುತ್ತಾ, ಅನೇಕರು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಆದರೆ ನಮಗೆ ಅವಕಾಶ ಕೊಡಲು ಸಾಧ್ಯವಾಗುತ್ತಿಲ್ಲ. ಕಷ್ಟ ಕಾಲದಲ್ಲಿ ಪಕ್ಷದ ಜತೆಗಿದ್ದ ಯೋಗೀಶ್ ಬಾಬು ಬಗ್ಗೆ ಗಮನದಲ್ಲಿದೆ ಎಂದರು.
ಇದನ್ನೂ ಓದಿ: ಭೀಕರ ಅಪಘಾತ; ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು