ಮೈಸೂರು: ಎಲ್ಐಸಿ ಖಾಸಗೀಕರಣಗೊಳಿಸುವುದನ್ನು ನಿಲ್ಲಿಸುವುದು, ಕುಟುಂಬ ಪಿಂಚಣಿ ಜಾರಿಗೊಳಿಸಿವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಎಲ್ಐಸಿ ನಿವೃತ್ತ ನೌಕರರ ಸಂಘದ ವತಿಯಿಂದ ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಎಲ್ಐಸಿ ವಿಭಾಗೀಯ ಅಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರ ಎಲ್ಐಸಿಯನ್ನು ಖಾಸಗೀಕರಣ ಮಾಡಲು ಮುಂದಾಗಿರುವುದು ಸರಿಯಲ್ಲ. ವಿಮಾ ಖಾಸಗೀಕರಣ ದೇಶದ್ರೋಹವಾಗಿದ್ದು, ಕೂಡಲೇ ನಿಲ್ಲಿಸಬೇಕು. ಈಗಾಗಲೇ ಒಪ್ಪಿಕೊಂಡಿರುವ ಕುಟುಂಬ ಪಿಂಚಣಿ ಅನುಕೂಲಗಳ ಅಧಿಸೂಚನೆ ಜಾರಿ ಮಾಡಬೇಕು.
ಕುಟುಂಬ ಪಿಂಚಣಿ ಶೇ.30ರಷ್ಟು ಹೆಚ್ಚಳ ಮಾಡಬೇಕು. 1995ರ ನಂತರ ಪಿಂಚಣಿ ಹಣ ಪರಿಷ್ಕರಣೆ ಮಾಡದಿರುವುದು ಖಂಡನೀಯ, 2010ರ ಒಳಗೆ ನಿವೃತ್ತಿ ಹೊಂದಿದ ವಿಮಾ ನೌಕರರ ಪಿಂಚಣಿ ತುಂಬಾ ಕಡಿಮೆ ಇದೆ. ಈಗಾಗಲೇ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಸರ್ಕಾರ ಇಂದು ಸಬ್ಸಿಡಿ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದೆ. ಇದು ಸಮಾಜಕ್ಕೆ ಒಳ್ಳೆಯದಲ್ಲ. ಕೂಡಲೇ ಕುಟುಂಬ ಪಿಂಚಣಿ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.