ಕುಂದಗೋಳ: ಹಳೇ ಮೊಬೈಲ್ನಲ್ಲಿ ಕುಟುಂಬ ಸಮೀಕ್ಷೆ ಕಾರ್ಯಕ್ಕೆ ಒತ್ತಡ ಹೇರುತ್ತಿರುವುದನ್ನು ಖಂಡಿಸಿ ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಎದುರು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ಸೋಮವಾರ ಪ್ರತಿಭಟನೆ ನಡೆಸಿದರು.
2020ರಲ್ಲಿ ಪೋಷಣ ಅಭಿಯಾನ ಅಂಗವಾಗಿ ಮೊಬೈಲ್ಗಳನ್ನು ವಿತರಿಸಲಾಗಿದೆ. ಈ ಮೊಬೈಲ್ಗಳಲ್ಲೇ ದಿನನಿತ್ಯವೂ ಕಚೇರಿಯ ವಿವಿಧ ಕೆಲಸ ಕಾರ್ಯ ಮಾಡಿರುವುದರಿಂದ ಹಾಳಾಗಿವೆ. ಇಂತಹ ಮೊಬೈಲ್ಗಳಲ್ಲಿ ಕುಟುಂಬ ಸಮೀಕ್ಷೆ ಮಾಡಲು ಇಲಾಖೆಯಿಂದ ಒತ್ತಡ ಹೇರಲಾಗುತ್ತಿದೆ ಎಂದು ಕಾರ್ಯಕರ್ತೆಯರು ಆರೋಪಿಸಿದರು.
ತಾಲೂಕಿನ ಎಲ್ಲ ಕಾರ್ಯಕರ್ತೆಯರಿಗೆ ನೀಡಿರುವ ಹಳೆಯ ಮೊಬೈಲ್ಗಳನ್ನು ಜು. 10ರಂದು ಹಿಂದಿರುಗಿಸುತ್ತೇವೆ ಎಂದು ಶಿಶು ಯೋಜನಾಧಿಕಾರಿ ಅನ್ನಪೂರ್ಣ ಸಂಗಳದ ಅವರಿಗೆ ಜು. 6ರಂದು ಲಿಖಿತ ಮನವಿ ಸಲ್ಲಿಸಲಾಗಿದೆ. ಅದರಂತೆ ಸೋಮವಾರ ಮಧ್ಯಾಹ್ನ 1 ಗಂಟೆಗೆ ತಾಲೂಕಿನ ಎಲ್ಲ ಕಾರ್ಯಕರ್ತೆಯರು ಮೊಬೈಲ್ ಹಿಂದುರಿಗಿಸಲು ಸಿಡಿಪಿಒ ಕಚೇರಿಗೆ ಆಗಮಿಸಿದಾಗ ಯಾವೊಬ್ಬ ಅಧಿಕಾರಿಗಳು ಇರಲಿಲ್ಲ. ಕಚೇರಿ ಎದುರು ಸಂಜೆ 6 ಗಂಟೆಗೆವರೆಗೂ ಕಾಯ್ದು ಪ್ರತಿಭಟಿಸಿದ್ದೇವೆ. ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ ಎಂದು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಪಾರ್ವತಿ ಬೂದಿಹಾಳ ಆರೋಪಿಸಿದರು. ಅಲ್ಲದೆ, ಜು. 11ರಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸುತ್ತೇವೆ ಎಂದು ಹೇಳಿ ಪ್ರತಿಭಟನೆ ಸ್ಥಗಿತಗೊಳಿಸಿದರು. ಪ್ರತಿಭಟನೆಯಲ್ಲಿ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.