ಶಿಗ್ಗಾಂವಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದ 108 ಶ್ರೀ ಕಾಮಕುಮಾರ ನಂದಿ ಮುನಿ ಮಹಾರಾಜರ ಹತ್ಯೆ ಖಂಡಿಸಿ ತಾಲೂಕು ದಿಗಂಬರ ಜೈನ ಸಮಾಜದ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಪೋಸ್ಟ್ ಆಫೀಸಿನಿಂದ ಮೆರವಣಿಗೆ ಆರಂಭಿಸಿ ಹಳೇ ಬಸ್ ನಿಲ್ದಾಣ ಮಾರ್ಗವಾಗಿ ರಾಣಿ ಚನ್ನಮ್ಮ ವೃತ್ತಕ್ಕೆ ಆಗಮಿಸಿ ತಹಸೀಲ್ದಾರ್ ಸಂತೋಷ ಹಿರೇಮಠ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಅಹಿಂಸಾ ಮಾರ್ಗದಲ್ಲಿ ನಡೆಯುವ ಸಮಾಜದ ಒಳಿತಿಗಾಗಿ ಸದಾ ಶ್ರಮಿಸುತ್ತಿದ್ದ ಜೈನ ಸಮುದಾಯದ ಮುನಿಗಳನ್ನು ಕ್ರೂರವಾಗಿ ಕೊಲೆ ಗೈದಿರುವುದು ಖಂಡನೀಯ. ಯಾವುದೇ ಸಮಾಜದ ಸ್ವಾಮೀಜಿಗಳಿಗೆ ಇಂಥ ಸ್ಥಿತಿ ಬರಬಾರದು. ಹತ್ಯೆಯಂತಹ ಘಟನೆಯನ್ನು ತಾಲೂಕು ದಿಗಂಬರ ಜೈನ ಸಮಾಜ ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಲ್ಲ ಸಮುದಾಯದ ಹಿರಿಯರು ತೀವ್ರವಾಗಿ ಖಂಡಿಸುತ್ತೇವೆ. ಮುಂದೆ ಇಂಥ ಘಟನೆಗಳು ನಡೆಯದಂತೆ ಸರ್ಕಾರ ಎಚ್ಚರ ವಹಿಸಬೇಕು. ಹತ್ಯೆ ಕೋರರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸ್ಥಳೀಯ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಮಾಜಿ ಶಾಸಕ ಸಯ್ಯದ್ ಅಜೀಂಪೀರ್ ಖಾದ್ರಿ, ವಿಧಾನಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ದುಂಡಿಗೌಡ್ರ, ತಾಲೂಕು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಜೈನ ಸಮಾಜದ ತಾಲೂಕು ಅಧ್ಯಕ್ಷ ರವೀಂದ್ರ ಪಾಸಾರ, ಶಶಿಕಾಂತ್ ಹಿತ್ತಲಕೇರಿ, ಕುಬೇರಪ್ಪ ಸಿದ್ದಣ್ಣನವರ, ಪ್ರಕಾಶ ದರಣೆಪ್ಪನವರ, ಪಾರ್ಶ್ವನಾಥ ಕೋಟಿ, ಮಹಾವೀರ ಕೋಳೂರ, ಶಾಂತಪ್ಪ ಸೊಗಲಿ, ಜಿನ್ನಪ್ಪ ವರೂರ, ಅಭಿನಂದನ ಅವರಾದಿ, ಅರುಣ ಜಕ್ಕಣ್ಣನವರ, ವೀರೇಂದ್ರ ಬಳಿಗಾರ, ಚಂದ್ರಪ್ಪ ಅಂಗಡಿ, ಪವನ ದೇಸಾಯಿ ಸೇರಿದಂತೆ ತಾಲೂಕಿನ ವಿವಿಧ ಘಟಕದ ಜೈನ ಸಮಾಜದ ಪ್ರಮುಖರು ಮತ್ತು ಶಾಸಕ ಶ್ರಾವಕಿಯರು, ನೂರಾರು ಜನರು ಪಾಲ್ಗೊಂಡಿದ್ದರು.