ಇಳಕಲ್ಲ(ಗ್ರಾ ): ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸೊಲ್ಲಾಪುರ- ಮಂಗಳೂರ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸೊಲಬಗೇರಿ ಮಡ್ಡಿಯ ರಸ್ತೆಯನ್ನು ಬಂದ್ ಮಾಡಿದ ಹಿನ್ನೆಲೆಯಲ್ಲಿ ಭಾನುವಾರ ಚಳಗೇರಿ ಮಠದ ವೀರ ಸೋಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಪ್ರಾಧಿಕಾರದ ಸಿಬ್ಬಂದಿ ಸೊಲಬಗೇರಿ ಮಡ್ಡಿ ರಸ್ತೆ ಶನಿವಾರ ಬಂದ್ ಮಾಡಿದಾಗ ಅಲ್ಲಿಯೇ ಹೊಲದಲ್ಲಿದ್ದ ರೈತರು ವಿರೋಧಿಸಿದ್ದರು. ಆಗ ಅವರ ಮೇಲೆ ಹಲ್ಲೆ ನಡೆಸಿದ ಸಿಬ್ಬಂದಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಪ್ರಾಧಿಕಾರದ ಕೆಲಸಕ್ಕೆ ಅಡೆತಡೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದರಿಂದಾಗಿ ತಾಲೂಕಿನ ರೈತರು ಭಾನುವಾರ ಪ್ರತಿಭಟನೆ ನಡೆಸುವ ಜತೆಗೆ ಹೆದ್ದಾರಿ ಬಂದ್ ಮಾಡಲು ಮುಂದಾದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಮನಗಂಡ ಪಿಎಸ್ಐ ಲಕ್ಷ್ಮೀ ಕಾಂತ ಬಾನಿಗೋಳ ರೈತರ ಮನವೊಲಿಸಿ ಪ್ರತಿಭಟನೆ ನಿಲ್ಲಿಸಲು ಸೂಚಿಸಿದರಲ್ಲದೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ತಾಲೂಕಿನ ರೈತರಾದ ಶಶಿಕಾಂತ ಬಂಡರಗಲ್, ರೈತ ಸಂಘದ ಕಾರ್ಯಾಧ್ಯಕ್ಷ ಗುರು ಗಾಣಿಗೇರ, ಬಸಬರಾಜ ಹುಡೆದಮನಿ, ಅಯ್ಯನಗೌಡ ಪಾಟೀಲ್, ಬಾಗಲಕೋಟೆ ಜಿಪಂ ಮಾಜಿ ಅಧ್ಯಕ್ಷ ಹನುಮಂತಪ್ಪ ರಾಠೋಡ, ಶರಣಪ್ಪ ಜಾಧವ, ರಾಜಶೇಖರ ಎಂ.ಆರ್.ಪಾಟೀಲ್, ದೇವೇಂದ್ರಗೌಡ ಪಾಟೀಲ್ ಇತರರಿದ್ದರು.