ಚಿಕ್ಕಮಗಳೂರು: ನಿತ್ಯ ಹರಿದ್ವರ್ಣದ ಕಾಡು, ಹಸಿರು ಹೊದಿಕೆಯನ್ನು ಹೊಂದಿರುವ ಪಶ್ಚಿಮಘಟ್ಟ ಸೇರಿದಂತೆ ರಾಜ್ಯದ ಪರಿಸರವನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಕರ್ತವ್ಯ ಎಂದು ರಾಜ್ಯ ಪರಿಸರ ತಜ್ಞ ಮೌಲ್ಯಮಾಪನ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್ ತಿಳಿಸಿದರು.
ರಾಜ್ಯ ಪರಿಸರ ತಜ್ಞ ಮೌಲ್ಯಮಾಪನ ಸಮಿತಿಯ ಅಧ್ಯಕ್ಷರಾಗಿ ನೇಮಕವಾದ ಹಿನ್ನೆಲೆಯಲ್ಲಿ ಮರ್ಲೆ ಗ್ರಾಪಂ ಹಾಗೂ ಬೀರದೇವರ ಟ್ರಸ್ಟ್ ಹರಿಹರದಳ್ಳಿ ಅವರಿಂದ ತಮ್ಮ ನಿವಾಸದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಾನವ ತನ್ನ ಅಗತ್ಯವನ್ನು ಮೀರಿ ಪರಿಸರವನ್ನು ಬಳಕೆ ಮಾಡುತ್ತಿರುವುದರಿಂದ ನಿಸರ್ಗದಲ್ಲಿ ಏರುಪೇರಾಗುತ್ತಿದೆ. ಪರಿಸರ ಸಮತೋಲನ ಕಾಯ್ದುಕೊಳ್ಳುವುದು ನಮ್ಮೆಲ್ಲರ ಆದ್ಯತೆಯಾಗಬೇಕು. ಸಮಿತಿಯಿಂದ ನಿರಪೇಕ್ಷಣ ಪತ್ರ ನೀಡುವಾಗ ನಿಗಾವಹಿಸಬೇಕು. ನಿಯಮ ನೀರಿದ ಕಲ್ಲು ಗಣಿಗಾರಿಕೆ, ಗಣಿಗಾರಿಕೆ ಹಾಗು ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡದೇ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮರ್ಲೆ ಗ್ರಾಪಂ ಅಧ್ಯಕ್ಷೆ ಸುಧಾ ಮಂಜುನಾಥ್, ಸದಸ್ಯರಾದ ಜಗದೀಶ್, ಬಸವರಾಜು, ಎನ್.ಡಿ.ಮಂಜುನಾಥ್, ಮುಖಂಡರಾದ ಎಚ್.ಎಲ್.ಬಲರಾಮ್, ಚಂದ್ರಶೇಖರ್, ಬಸವರಾಜ್ ಮತ್ತಿತರರಿದ್ದರು.