ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಡಿವೈಎಸ್ಪಿಗಳ ಮುಂಬಡ್ತಿಗೆ ಮತ್ತೆ ಚಾಲ್ತಿ ಸಿಕ್ಕಿದೆ. ಇಲಾಖೆಯಲ್ಲಿ ವಿವಿಧ ಘಟಕಗಳಲ್ಲಿ ಸೇವೆ ಸಲ್ಲಿಸುತ್ತಿರುವ 57 ಡಿವೈಎಸ್ಪಿ (ಸಿವಿಲ್)ಗಳಿಗೆ ನಾನ್ ಐಪಿಎಸ್ಗೆ ಬಡ್ತಿ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
57 ಡಿವೈಎಸ್ಪಿಗಳ ವಿರುದ್ಧ ಬಾಕಿ ಇರುವ ಇಲಾಖಾ ವಿಚಾರಣೆ, ನ್ಯಾಯಾಂಗ ಕ್ರಿಮಿನಲ್ ಪ್ರಕರಣ ಮತ್ತು ಚಾಲ್ತಿ ಶಿಕ್ಷೆಗಳ ಇತ್ಯಾದಿ ಮಾಹಿತಿಯನ್ನು ನೀಡುವಂತೆ ಎಲ್ಲ ಘಟಕಗಳಿಂದ ಕೋರಿದೆ. 2018-19 ರಿಂದ 2022-23ರ ನಡುವೆ ಅಧಿಕಾರಿಗಳ ಸೇವಾ ಪುಸ್ತಕಗಳನ್ನು ಪ್ರಧಾನ ಕಚೇರಿಗೆ ಕಳುಹಿಸಿ ಕೊಡುವಂತೆ ರಾಜ್ಯ ಪೊಲೀಸ್ ಇಲಾಖೆ ಹೆಚ್ಚುವರಿ ಮಹಾನಿರ್ದೇಶಕ (ಆಡಳಿತ) ಸೌಮೇಂದು ಮುಖರ್ಜಿ ಆದೇಶಿಸಿದ್ದಾರೆ.
ಡಿವೈಎಸ್ಪಿಗಳು ಹೊರತುಪಡಿಸಿ ಇನ್ಸ್ಪೆಕ್ಟರ್ಗಳು ಸಹ ಬಡ್ತಿಗಾಗಿ ಕಳೆದ ಒಂದು ವರ್ಷದಿಂದ ಕಾಯುತ್ತಿದ್ದಾರೆ. ಇದರಲ್ಲಿ ಸಾಕಷ್ಟು ಮಂದಿ ಡಿವೈಎಸ್ಪಿ ಹುದ್ದೆಗೆ ಬಡ್ತಿ ಸಿಗದೆ ಇಡೀ ಪೊಲೀಸ್ ಸೇವಾವಧಿಯಲ್ಲಿ ಕೇವಲ ಒಂದು ಬಡ್ತಿ ಪಡೆದು ಇನ್ಸ್ಪೆಕ್ಟರ್ ಆಗಿಯೇ ವಯೋನಿವೃತ್ತಿ ಹೊಂದಿರುವರ ಪಟ್ಟಿ ಸಹ ಹೆಚ್ಚಾಗಿಯೇ ಇದೆ ಎಂದು ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.