ಬೆಳಗಾವಿ: ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ಎಲ್ಲ ಸೌಲಭ್ಯಗಳನ್ನು ವೃತ್ತಿಪರ ನೇಕಾರರಿಗೂ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ
ನೇಕಾರರ ಸೇವಾ ಸಂಘದ ನೇತೃತ್ವದಲ್ಲಿ ನೇಕಾರರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟಿಸಿದರು. ಬಳಿಕ ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ವೃತ್ತಿಪರ ನೇಕಾರರು ಹಲವು ವರ್ಷಗಳಿಂದ ಕೈಮಗ್ಗ, ವಿದ್ಯುತ್ ಚಾಲಿತ ಯಂತ್ರಗಳ ಮೂಲಕ ನೇಕಾರಿಕೆಯಲ್ಲಿ ತೊಡಗಿದ್ದಾರೆ. ಪ್ರವಾಹ, ಲಾಕ್ಡೌನ್ನಿಂದಾಗಿ ಸಂಪೂರ್ಣವಾಗಿ ನೇಕಾರಿಕೆ ನಲುಗಿ ಹೋಗಿದೆ. ಹೀಗಾಗಿ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಅನೇಕ ನೇಕಾರರು ಮಾಡಿದ ಸಾಲ ತೀರಿಸಲಾಗದೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಸರ್ಕಾರ ನಮ್ಮ ಸಮಸ್ಯೆ ನಿವಾರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿವಿಧ ಬೇಡಿಕೆ: ವೃತ್ತಿಪರ ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಕಟ್ಟಡ ಕಾರ್ಮಿಕರಿಗೆ ನೀಡುವ ಎಲ್ಲ ಸೌಲಭ್ಯ ಒದಗಿಸಬೇಕು. 55 ವರ್ಷ ಮೇಲ್ಪಟ್ಟ ನೇಕಾರರಿಗೆ ಐದು ಸಾವಿರ ರೂ. ಮಾಸಾಶನ ನೀಡಬೇಕು. ಉಚಿತ ವಿದ್ಯುತ್ ಪೂರೈಸಬೇಕು. ನೇಕಾರ ಸಮ್ಮಾನ್ ಯೋಜನೆಗೆ ವಿದ್ಯುತ್ ಚಾಲಿತ ಮಗ್ಗಗಳ ಕೂಲಿ ಕಾರ್ಮಿಕ ನೇಕಾರರನ್ನು ಒಳಪಡಿಸಬೇಕು. ಸರ್ಕಾರವೇ ಸೀರೆ ಖರೀದಿಸಬೇಕು. ನೇಕಾರರ ನಿಗಮದ 108 ಕೋಟಿ ರೂ. ಸಾಲವನ್ನು ಸರ್ಕಾರವೇ ಭರಿಸಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ, ಸುಧೀರ ಪಿ.ಆರ್., ಶ್ರೀಕಾಂತ ಕುಂಬಾರ, ರವಿ ಪಾಟೀಲ, ಅಶೋಕ ಎ.ಕೆ., ಸಚಿನ್ ಕುಂಬಾರ ಇತರರಿದ್ದರು.