ವಿಜಯವಾಣಿ ಸುದ್ದಿಜಾಲ ಸವಣೂರ
ಭಾವೈಕ್ಯತೆಯಿಂದ ಆಚರಿಸುವ ಸಾಂಪ್ರದಾಯಿಕ ಹಬ್ಬಗಳ ಕುರಿತು ಅರ್ಥೈಸಿಕೊಳ್ಳುವುದು ಅವಶ್ಯ ಎಂದು ವಿದ್ಯಾ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ ಮೆಣಸಿನಕಾಯಿ ಹೇಳಿದರು.
ರಂಗಪಂಚಮಿ ಅಂಗವಾಗಿ ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಸೋಗಿನ ಬಂಡಿ ಹಾಗೂ ಯಮಧರ್ಮ, ಚಿತ್ರಗುಪ್ತ, ಕಿಂಕರರ ರೂಪಕ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪಟ್ಟಣದಲ್ಲಿ ನಡೆಯುವ ರಂಗಪಂಚಮಿಗೆ ಶತಮಾನಗಳ ಇತಿಹಾಸ ಇದೆ. ಯುವ ಜನತೆ ಶುಕ್ರವಾರ ಜರುಗಲಿರುವ ಬಣ್ಣದ ಆಟದಲ್ಲಿ ಒತ್ತಾಯ ಪೂರ್ವಕವಾಗಿ ಬಣ್ಣ ಎರಚುವ ಬದಲಾಗಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ತೊಡಗಬೇಕು ಎಂದು ಸಲಹೆ ನೀಡಿದರು.
ಮಲ್ಲಾರಪ್ಪ ತಳ್ಳಿಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ ಚರಂತಿಮಠ, ಹನುಮಂತಗೌಡ ಪಾಟೀಲ, ಮಹೇಶ ಮುದಗಲ್, ಉಮೇಶ ಮುಂಜೋಜಿ, ನಿಂಗಪ್ಪ ಬಂಕಾಪೂರ, ಶಂಕರ ಪಾಟೀಲ, ರಾಮಣ್ಣ ಸಂಕ್ಲಿಪೂರ, ಪರಶುರಾಮ ಈಳಗೇರ, ಇತರರು ಪಾಲ್ಗೊಂಡಿದ್ದರು.
ಸಾರೋಟದಲ್ಲಿ ಮೆರವಣಿಗೆ: ಶ್ರೀಪಾದ ಗಿತ್ತೆ ಯಮಧರ್ಮ ಹಾಗೂ ಸುನೀಲ ಕಲಾಲ, ರಾಘವೇಂದ್ರ ಬಾಬನಿ ಸೇರಿ ನೂರಾರು ಯುವಕರು ಚಿತ್ರಗುಪ್ತ ಹಾಗೂ ದೂತರ ವೇಷಭೂಷಣ ತೊಟ್ಟು ಸಾರೋಟದಲ್ಲಿ ಮೆರವಣಿಗೆ ಕೈಗೊಂಡು ಸಾರ್ವಜನಿಕರನ್ನು ರಂಜಿಸಿದರು.
ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಂಡ ಸೋಗಿನ ಬಂಡಿ ಹಾಗೂ ರೂಪಕ ಮೆರವಣಿಗೆ ಭರಮಲಿಂಗೇಶ್ವರ ವೃತ್ತ, ಶುಕ್ರವಾರ ಪೇಟೆ, ಮಾರುಕಟ್ಟೆ, ಶಿಂಪಿಗಲ್ಲಿ, ಕೋರಿಪೇಟೆ, ಬುಧವಾರ ಪೇಟೆ, ಉಪ್ಪಾರ ಓಣಿ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.