ಲಖನೌ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರಪ್ರದೇಶ ಪೊಲೀಸರು ಮತ್ತೆ ತಡೆದಿದ್ದಾರೆ. ಕೆಲವು ದಿನಗಳ ಹಿಂದೆ ರಾಜ್ಯದ ಲಖೀಂಪುರ್ ಖೇರಿಯಲ್ಲಿ ನಡೆದಿದ್ದ ಹಿಂಸಾಚಾರದ ಸ್ಥಳಕ್ಕೆ ಹೋಗದಂತೆ ಅವರನ್ನು ತಡೆಯಲಾಗಿತ್ತು. ಈ ಬಾರಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಸಾವಪ್ಪಿರುವ ವ್ಯಕ್ತಿಯ ಕುಟುಂಬವನ್ನು ಮಾತನಾಡಿಸಲು ಹೊರಟಿದ್ದಾಗ ಈ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಮಂಗಳವಾರ ರಾತ್ರಿ ಉತ್ತರಪ್ರದೇಶದ ಆಗ್ರಾದಲ್ಲಿ ಜಗದೀಶ್ಪುರ ಪೊಲೀಸ್ ಠಾಣೆಯ ಸ್ಟೋರ್ ರೂಂನಿಂದ 25 ಲಕ್ಷ ರೂಪಾಯಿ ಕದ್ದಿರುವ ಆರೋಪದ ಮೇಲೆ ಬಂಧಿಸಲಾಗಿದ್ದ ಅರುಣ್ ವಾಲ್ಮೀಕಿ ಎಂಬ ಉದ್ಯೋಗಿ ಸಾವಪ್ಪಿದ್ದಾನೆ. ಪೊಲೀಸರು ಅವನ ಮನೆಯಲ್ಲಿ ಶೋಧ ನಡೆಸುವ ಸಂದರ್ಭದಲ್ಲಿ ಅವನ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ತಲುಪುವ ಮುನ್ನ ಸಾವಪ್ಪಿದನೆಂದು ಪೊಲೀಸರ ಹೇಳಿಕೆ ತಿಳಿಸಿದೆ.
ಇದನ್ನೂ ಓದಿ: ಎಂದೂ ಮುಗಿಯದ ಕತೆಯಾಗಬಾರದು! ಯುಪಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ
ವಿರೋಧ ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿ ಆತನ ಕುಟುಂಬಸ್ಥರನ್ನು ಭೇಟಿಯಾಗಲು ಇಂದು ಹೊರಟಿದ್ದರು. ಈ ಸಂದರ್ಭ ಲಖನೌ-ಆಗ್ರಾ ಹೆದ್ದಾರಿಯಲ್ಲಿ ಸಾಗುತ್ತಿದ್ದ ಅವರ ಕಾನ್ವಾಯ್ಅನ್ನು ಪೊಲೀಸರು ತಡೆದಿದ್ದಾರೆ ಎನ್ನಲಾಗಿದೆ. ಆಗ್ರಾದಲ್ಲಿ ಕಾನೂನು ಸುವ್ಯವಸ್ಥೆಯ ಸಮಸ್ಯೆ ಇದ್ದು, ಜಿಲ್ಲಾ ಮ್ಯಾಜಿಸ್ಟ್ರೇಟರು ಯಾವುದೇ ರಾಜಕೀಯ ವ್ಯಕ್ತಿಗೆ ಪ್ರವೇಶ ನೀಡಬಾರದೆಂದು ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕುಪಿತಗೊಂಡಿರುವ ಪ್ರಿಯಾಂಕ, “ಯುಪಿ ಸರ್ಕಾರ ಏತಕ್ಕಾಗಿ ಹೆದರುತ್ತಿದೆ” ಎಂದು ಪ್ರಶ್ನಿಸಿದ್ದಾರೆ. “ನಾನು ಮನೆಯಲ್ಲಿದ್ದರೆ ಅವರಿಗೆ ತೊಂದರೆಯಿಲ್ಲ, ಕಛೇರಿಗೆ ಹೋದರೆ ತೊಂದರೆಯಿಲ್ಲ. ನಾನು ಬೇರೆಲ್ಲಾದರೂ ಹೋದರೆ, ಅವರು ಈ ‘ತಮಾಷಾ’ ಶುರುಮಾಡಿಬಿಡುತ್ತಾರೆ” ಎಂದು ಟೀಕಿಸಿರುವ ಅವರು, “ಸ್ವತಂತ್ರವಾಗಿ ಓಡಾಡಲು ನನಗೆ ಹಕ್ಕಿದೆ” ಎಂದಿದ್ದಾರೆ. (ಏಜೆನ್ಸೀಸ್)
ಎಷ್ಟೇ ಶಕ್ತಿಶಾಲಿಯಾದರೂ, ವಂಚಕರನ್ನು ಸರ್ಕಾರ ಬಿಡುವುದಿಲ್ಲ: ಪ್ರಧಾನಿ ಮೋದಿ