ನವದೆಹಲಿ: ಭಾರತ-ಚೀನಾ ಗಡಿ ಸಂಘರ್ಷದ ವಿಚಾರದಲ್ಲಿ ಬಹುಜನ ಸಮಾಜ ಪಾರ್ಟಿಯ ಬೆಂಬಲ ಬಿಜೆಪಿ ಪಕ್ಷಕ್ಕೆ ಎಂದು ಹೇಳಿರುವ ಮುಖ್ಯಸ್ಥೆ ಮಾಯಾವತಿ ವಿರುದ್ಧ ಕಾಂಗ್ರೆಸ್ ನಾಯಕಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಮಾಯಾವತಿ, ಚೀನಾಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಸಹ ನಮ್ಮ ಬೆಂಬಲ ಇದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಅದೇ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು. ಬಡವರು, ಹಿಂದುಳಿದವರಿಗಾಗಿ ಕಾಂಗ್ರೆಸ್ ಏನು ಮಾಡುತ್ತಿದೆ? ಅವರ ಆಡಳಿತ ಇರುವ ರಾಜ್ಯಗಳಲ್ಲಿ ವಲಸೆ ಕಾರ್ಮಿಕರ ಉದ್ಯೋಗ, ಹಿತರಕ್ಷಣೆಗಾಗಿ ಏನು ಕ್ರಮ ಕೈಗೊಂಡಿದೆ ಎಂದು ಖಾರವಾಗಿ ಪ್ರಶ್ನಿಸಿದ್ದರು.
ಇದೀಗ ಪ್ರಿಯಾಂಕಾ ಗಾಂಧಿ ಮಾಯಾವತಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ಬಿಜೆಪಿಯ ಅಘೋಷಿತ ವಕ್ತಾರರು ಎಂದು ಪರೋಕ್ಷವಾಗಿಯೇ ವ್ಯಂಗ್ಯವಾಡಿದ್ದಾರೆ. ಬರುಬರುತ್ತ ಕೆಲವು ಪ್ರತಿಪಕ್ಷಗಳ ಮುಖ್ಯಸ್ಥರು ಬಿಜೆಪಿಯ ಅಘೋಷಿತ ವಕ್ತಾರರಾಗಿ ಬದಲಾಗುತ್ತಿದ್ದಾರೆ. ಅದು ನನ್ನ ಗ್ರಹಿಕೆಗೆ ಸ್ಪಷ್ಟವಾಗಿ ಬರುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಚೀನಾದ ಆ್ಯಪ್ಗಳನ್ನು ನಿಷೇಧಿಸಿದ ಭಾರತವನ್ನು ಶ್ಲಾಘಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ
ಚೀನಾ ವಿಚಾರದಲ್ಲಿ ಯಾರೂ ಯಾವುದೇ ರಾಜಕೀಯ ಪಕ್ಷದ ಜತೆ ನಿಲ್ಲುವ ಅಗತ್ಯ ಇರುವುದಿಲ್ಲ. ಬದಲಿಗೆ ಪ್ರತಿಯೊಬ್ಬರೂ ಇಡೀ ದೇಶದ ಜತೆ ನಿಲ್ಲಬೇಕು. ನಮ್ಮ ದೇಶದ, ಭೂಮಿಯ ಐಕ್ಯತೆ, ಸಮಗ್ರತೆಗಾಗಿ ಒಟ್ಟಾಗಿ ನಿಂತರೆ ಸಾಕಾಗುತ್ತದೆ ಎಂದು ಹೇಳಿದ್ದಾರೆ.
ಚೀನಾ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ದಿನದಿಂದಲೂ ಇತ್ತ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಒಂದಲ್ಲ ಒಂದು ಟೀಕಾಸ್ತ್ರ ಪ್ರಯೋಗ ಮಾಡುತ್ತಿದೆ. ನಮ್ಮ ದೇಶದ ಭೂಮಿಯನ್ನು ಚೀನಾ ಆಕ್ರಮನ ಮಾಡಿಕೊಂಡಿದೆ..ಚೀನಾಕ್ಕೆ ಮೋದಿಯವರು ಶರಣಾಗಿದ್ದಾರೆ ಎಂಬಿತ್ಯಾದಿ ಹೇಳಿಕೆಗಳನ್ನು ಕಾಂಗ್ರೆಸ್ ಮುಖಂಡರು ನೀಡುತ್ತಿದ್ದಾರೆ. (ಏಜೆನ್ಸೀಸ್)
‘ಚೀನಾಕ್ಕೆ ಮುಖಭಂಗ ಮಾಡಲು ದಲೈ ಲಾಮ ಅವರಿಗೆ ಭಾರತ ರತ್ನ ನೀಡಿ…’-ಸಂಘಪರಿವಾರದ ಸಲಹೆ