ಕಡೂರು: ಕರೊನಾ ಭೀತಿ ನಡುವೆಯೂ ಸಂಭ್ರಮದ ದೀಪಾವಳಿ ಆಚರಣೆಗೆ ಮುಂದಾಗಿರುವ ತಾಲೂಕಿನ ಜನತೆ ಹಬ್ಬದ ಖರೀದಿಯಲ್ಲಿ ನಿರತರಾಗಿದ್ದರು.
ಹಬಕ್ಕೆ ಹೂ-ಹಣ್ಣುಗಳ ವ್ಯಾಪಾರವೂ ಜೋರಾಗಿತ್ತು. ಸೇವಂತಿಗೆ 10 ಮಾರಿನ ಕುಚ್ಚಿಗೆ 600-750ಕ್ಕೆ ಮಾರಾಟವಾಗುತ್ತಿದ್ದವು. ಬಾಳೆಕಂದು, ಮಾವಿನ ಸೊಪ್ಪು, ಬಾಳೆಎಲೆ, ಹಣ್ಣಗಳು, ಸಿಹಿತಿನಿಸುಗಳು ಖರೀದಿಸುವಲ್ಲಿ ಗ್ರಾಹಕರು ತಲ್ಲೀನರಾಗಿದ್ದರು.
ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಪಟಾಕಿ ಅಂಗಡಿ ಮಳಿಗೆಗಳು ಆರಂಭಿಸಲಾಗಿದೆ. ಮನೆ ಎದುರು ಕಟ್ಟುವ ಆಕಾಶಬುಟ್ಟಿ, ಆಲಂಕಾರಿಕ ವಸ್ತುಗಳು, ಹಣತೆ ಮತ್ತಿತರ ವಸ್ತುಗಳ ಖರೀದಿಗೆ ಗೃಹಿಣಿಯರು ಮುಂದಾದರೆ ಮಕ್ಕಳು, ಯುವಕರು ಪಟಾಕಿ ಖರೀದಿಯಲ್ಲಿ ತೊಡಗಿದ್ದರು.
ಹಬ್ಬದ ಪ್ರಯುಕ್ತ ಗ್ರಾಹಕರನ್ನು ಸೆಳೆಯಲು ಹಲವು ರಿಯಾಯಿತಿಗಳನ್ನು ಘೊಷಿಸಲಾಗಿತ್ತು. ಬಟ್ಟೆ ಅಂಗಡಿ, ಎಲೆಕ್ಟ್ರಾನಿಕ್ಸ್ ಉಪಕರಣಗಳ ಮಳಿಗೆಗಳು ಹಾಗೂ ಸಿಹಿ ತಿನಿಸುಗಳ ಮಳಿಗೆಗಳು ಗ್ರಾಹಕರಿಂದ ತುಂಬಿದ್ದವು. ಹಬ್ಬದ ಸಂಭ್ರಮಕ್ಕೆ ಕರೊನಾ ಭೀತಿ ಮತ್ತು ಸಾಮಾಜಿಕ ಅಂತರ ಮರೆಯಾಗಿತ್ತು.