ಮಂಡ್ಯ: ಕರ್ನಾಟಕ ಸಂಘದಿಂದ ಕೊಡಮಾಡುವ 11ನೇ ವರ್ಷದ ಡಾ.ಹಾಮಾನಾ ಪ್ರಶಸ್ತಿಗೆ ಕೆ.ಆರ್.ಪೇಟೆ ತಾಲೂಕು ಅಂಬಿಗರಹಳ್ಳಿಯ ಡಾ.ಸೋಮಶೇಖರ್ಗೌಡ ಹಾಗೂ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕು ಆಲಕೆರೆ ಅಗ್ರಹಾರ ಗ್ರಾಮದ ಪ್ರೊ.ಪಿ.ಮಹಾದೇವಯ್ಯ ಆಯ್ಕೆಯಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಏ.14ರಂದು ಸಂಜೆ 5.30ಕ್ಕೆ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಖ್ಯಾತ ವಕೀಲ ಸಿ.ಎಚ್.ಹನುಮಂತರಾಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ವಹಿಸಲಿದ್ದು, ಪ್ರಾಧ್ಯಾಪಕ ಡಾ. ಪಿ.ಬೆಟ್ಟೇಗೌಡ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಕೆನರಾ ಬ್ಯಾಂಕ್ ನಿವೃತ್ತ ಜನರಲ್ ಮ್ಯಾನೇಜರ್ ಡಾ.ಎಸ್.ಟಿ.ರಾಮಚಂದ್ರ, ಉದ್ಯಮಿ ವಿವೇಕ ಹೆಗ್ಗಡೆ ಭಾಗವಹಿಸಲಿದ್ದಾರೆ ಎಂದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್.ಬಿ.ಶಂಕರೇಗೌಡ ಇದ್ದರು.
ಪ್ರಶಸ್ತಿ ಪುರಸ್ಕೃತ ಪರಿಚಯ
ಡಾ. ಸೋಮಶೇಖರಗೌಡ: ಸೋಮೇಗೌಡ-ಸಣ್ಣತಾಯಮ್ಮ ದಂಪತಿ ಪುತ್ರ ಡಾ.ಸೋಮಶೇಖರಗೌಡ ಅವರ ಕೃಷಿ ಕುಟುಂಬ. ಭಾಷಾ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪಿಎಚ್ಡಿ ಪೂರೈಸಿದ್ದಾರೆ. ಅಧ್ಯಯನ ಮತ್ತು ಅಧ್ಯಾಪನದಿಂದ ಮಾನ್ಯತೆ ಪಡೆದಿದ್ದು, ‘ಭಾಷಾ ವಿಜ್ಞಾನ ವಿಭಾಗ, ‘ನಾವಾಡುವ ಭಾಷೆ’, ‘ಭಾಷಾ ರಚನೆ ಬಳಕೆ’ ಎಂಬ ಹಲವಾರು ಮೌಲಿಕ ಕೃತಿಗಳನ್ನು ನೀಡಿದ್ದಾರೆ. ‘ಭಾವಷ್ರೋತ’ ಎಂಬ ಕವನ ಸಂಕಲನದ ಮೂಲಕ ಕವಿಯಾಗಿಯೂ ಗುರುತಿಸಿಕೊಂಡಿದ್ದು, ‘ಕುವೆಂಪು ಅನುಸಂಧಾನ’ ಎಂಬ ವಿಮರ್ಶಾ ಕೃತಿಯನ್ನು ಹೊರತಂದಿದ್ದಾರೆ. ಡಾ. ಹಾಮಾನಾ ಗರಡಿಯಲ್ಲಿ ಪಳಗಿದ ಶಿಷ್ಯರಲ್ಲಿ ಇವರೂ ಒಬ್ಬರು. ಇವರನ್ನು ‘ಡಾ. ಹಾಮಾನ ಭಾಷಾ ವಿಜ್ಞಾನ ಹಿರಿಯ ಪ್ರಶಸ್ತಿ’ಗೆ ಆಯ್ಕೆ ಮಾಡಿದ್ದು, 50 ಸಾವಿರ ರೂ ನಗದನ್ನು ಒಳಗೊಂಡಿದೆ.
ಪ್ರೊ.ಪಿ.ಮಹಾದೇವಯ್ಯ: ಪುಟ್ಟಮಾದಯ್ಯ-ಮಹಾದೇವಮ್ಮ ದಂಪತಿ ಪುತ್ರ ಪ್ರೊ.ಪಿ.ಮಹಾದೇವಯ್ಯ ಅವರು, ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್ಡಿ ಪದವಿ ಪಡೆದಿದ್ದಾರೆ. ಭಾಷೆ ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ, ಭಾಷೆಯಲ್ಲಿ ಆಧ್ಯಾತ್ಮವಿದೆ, ಸಂಸ್ಕೃತಿಯಿದೆ, ಪ್ರಭುತ್ವದ ಮಜಲುಗಳಿವೆ. ಈ ಎಲ್ಲವನ್ನೂ ಶಾಸೀಯ ಅಧ್ಯಯನಕ್ಕೆ ಒಳಪಡಿಸಿ 20ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಅಧ್ಯಯನ, ಆಧ್ಯಾಪನ, ಬರವಣಿಗೆಯ ಜತೆಗೆ ವಿವಿಧ ಆಡಳಿತಾತ್ಮಕ ಸೇವೆಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಹಂಪಿ ಕನ್ನಡ ವಿವಿ ಭಾಷಾಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಹಣಕಾಸು ಅಧಿಕಾರಿಯಾಗಿ, ಕುಲಸಚಿವರಾಗಿ, ಅಧ್ಯಯನಾಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರನ್ನು ‘ಡಾ. ಹಾಮಾನಾ ಭಾಷಾ ವಿಜ್ಞಾನ ಯುವ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದ್ದು, 25 ಸಾವಿರ ರೂ ನಗದನ್ನು ಒಳಗೊಂಡಿದೆ.