ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವಂತಹದ್ದಾಗಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದರು.
ನಗರದ ನಗರದ ಕ್ಲಾಕ್ ಟವರ್ನಲ್ಲಿ ಶುಕ್ರವಾರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಸರ್ಕಾರದಲ್ಲಿ ಅನುದಾನ ಕೊರತೆಯಿದೆ. ಆದರೆ ಒಂದು ಧರ್ಮದ ಅಭಿವೃದ್ಧಿಗೆ ಅನುದಾನ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಮುಜರಾಯಿ ಇಲಾಖೆಯನ್ನು ಪ್ರಾಧಿಕಾರವನ್ನಾಗಿಸಿ ಹುಂಡಿ ಹಣವನ್ನು ಅವರ ಪಕ್ಷದ ಮುಖಂಡರ ಐಷಾರಾಮಿ ಜೀವನಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ದೇವಸ್ಥಾನಗಳನ್ನು ಬಳಕೆ ಮಾಡಿಕೊಂಡಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ ಎಂದು ಖಂಡಿಸಿದರು.
ರೈತರ, ಬಡವರ ವಿರೋಧಿ ಎಂದು ಹಣೆಪಟ್ಟಿ ಪಡೆದುಕೊಂಡಿರುವ ಸಿದ್ದರಾಮಯ್ಯ, ಜಾತಿಗಳ ಮೇಲೆ ಬಜೆಟ್ ನೀಡುತ್ತಿರುವುದನ್ನು ನೋಡುತ್ತಿದ್ದರೆ ಪಾಕಿಸ್ತಾನದ ಏಜೆಂಟರ ರೀತಿ ನಡೆದುಕೊಳ್ಳುತ್ತಿದ್ದಾರೆ ಅನಿಸುತ್ತಿದೆ. ಹೀಗಾಗಿ ರಾಜ್ಯದ ಜನರು ಹಿಡಿ ಹಿಡಿ ಶಾಪವನ್ನೂ ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರೈತರಿಗೆ 2 ಸಾವಿರ ಬರ ಪರಿಹಾರ ಕೊಡಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಮಸೀದಿಗಳು, ಚರ್ಚ್ಗಳು, ವಕ್ಫ್ ಬೋರ್ಡ್ಗಳಿಗೆ ಹಣ ನೀಡುತ್ತಿರುವುದನ್ನು ನೋಡಿದರೆ ಸಿದ್ದರಾಮಯ್ಯ ಈ ರಾಜ್ಯ ಹಾಗೂ ದೇಶದಲ್ಲಿ ಇರುವುದಕ್ಕೆ ಅನರ್ಹರು ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಅವರು ಕೂಡಲೇ ಪ್ರಧಾನಿಯವರನ್ನು ಕ್ಷಮೆ ಕೇಳಬೇಕು. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ರಾಜ್ಯಕ್ಕೆ ಕೇವಲ 62 ಸಾವಿರ ಕೋಟಿ ನೀಡಿತ್ತು. ಈಗ ಎನ್ಡಿಎ ಸರ್ಕಾರದಲ್ಲಿ 2.82 ಲಕ್ಷ ಕೋಟಿ ಹಣ ನೀಡಲಾಗಿದೆ. ಕೋಲಾರದಲ್ಲಿ ನಡೆದಿರುವ ಡಬಲ್ ರಸ್ತೆ ಕಾಮಗಾರಿಗಳನ್ನು ನರೇಂದ್ರ ಮೋದಿ ನೀಡಿರುವ ಅನುದಾನದಲ್ಲಿ ಮಾಡಲಾಗಿದೆ. ಲೋಕಸಭಾ ಕ್ಷೇತ್ರಕ್ಕೆ 22 ಸಾವಿರ ಕೋಟಿರೂ ಹಣವನ್ನು ನೀಡಿದ್ದಾರೆ. ರೈಲ್ವೇ ನಿಲ್ದಾಣ, ರಸ್ತೆಗಳು, ಜಲಜೀವನ್ ಮಿಷನ್ ಸೇರಿದಂತೆ ನಾನಾ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ ಎಂದರು.