More

    ರಾಗಿ ಖರೀದಿಗೆ ಸಿದ್ಧತೆ ಮಾಡಿಕೊಳ್ಳಿ: ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ

    ರಾಮನಗರ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ರೈತರು ಬೆಳೆದ ರಾಗಿ ಖರೀದಿಸಿ ಸಂಗ್ರಹಣೆ ಮಾಡಲು ಸರ್ಕಾರ ನೀಡಿರುವ ಮಾರ್ಗಸೂಚಿಯಂತೆ ಸಿದ್ಧತೆ ಮಾಡಿಕೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರಾಗಿ ಖರೀದಿ ಕುರಿತ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಇದೇ ಮೊದಲ ಬಾರಿಗೆ ಖರೀದಿ ಏಜೆನ್ಸಿಯಾಗಿ ರಾಜ್ಯ ಸಹಕಾರ ಮಾರಾಟ ಮಂಡಳವನ್ನು ಸರ್ಕಾರ ನಿಯೋಜಿಸಿದೆ. ಸ್ಥಳೀಯ ರೈತರ ಅಗತ್ಯಕ್ಕೆ ತಕ್ಕಂತೆ ಖರೀದಿ ಕೇಂದ್ರಗಳನ್ನು ತೆರೆಯಬೇಕಾಗಿದೆ. ಖರೀದಿಗೆ ಅನುಕೂಲವಾಗುವಂತೆ ಹಾಗೂ ರೈತರಿಗೆ ತೊಂದರೆಯಾಗದಂತೆ ಜಿಲ್ಲೆಯ 4 ತಾಲೂಕುಗಳಲ್ಲಿ ಎಪಿಎಂಸಿ ಮಾರುಕಟ್ಟೆ ಅಥವಾ ಇತರ ವಿಶಾಲವಾದ ಸಗಟು ಮಳಿಗೆಗಳಲ್ಲಿ ಖರೀದಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

    ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಬೆಂಬಲ ಬೆಲೆ ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳುವ ರೈತರು ರಾಗಿ ಬೆಳೆದಿರುವ ಬಗ್ಗೆ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಫ್ರೂಟ್ಸ್ ದತ್ತಾಂಶದಿಂದ ರೈತರ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲಾಗುವುದು. ಕೃಷಿ ಇಲಾಖೆ ಒದಗಿಸಿರುವ ಸರಾಸರಿ ಬೆಳೆ ಮಾಹಿತಿಯನ್ವಯ ಪ್ರತಿ ಎಕರೆಗೆ 10 ಕ್ವಿಂಟಾಲ್​ನಂತೆ ಗರಿಷ್ಠ 50 ಕ್ವಿಂಟಾಲ್​ವರೆಗೆ ರೈತರಿಂದ ರಾಗಿ ಖರೀದಿಸಲಾಗುವುದು ಎಂದರು.

    ಸುಗಮ ಖರೀದಿಗೆ ಟೋಕನ್ ವ್ಯವಸ್ಥೆ

    ರಾಮನಗರ ಜಿಲ್ಲೆಯ ಮಾಗಡಿ ಹಾಗೂ ಕನಕಪುರ ತಾಲೂಕುಗಳಲ್ಲಿ ಅತಿಹೆಚ್ಚು ರಾಗಿ ಖರೀದಿಯಾಗುವುದರಿಂದ ಖರೀದಿ ಕೇಂದ್ರದಲ್ಲಿ ನೂಕುನುಗ್ಗಲು ಉಂಟಾಗದಂತೆ ರೈತರಿಗೆ ಟೋಕನ್ ನೀಡುವಂತೆ ಹಾಗೂ ಯಾವುದೇ ದೂರಿಗೆ ಆಸ್ಪದ ನೀಡದಂತೆ ಕ್ರಮ ಕೈಗೊಳ್ಳುವಂತೆ ಟಿ.ಜವರೇಗೌಡ ಸೂಚಿಸಿದರು.

    ಕ್ವಿಂಟಾಲ್​ಗೆ 3,295 ರೂಪಾಯಿ ನಿಗದಿ

    ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಗಿ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್​ಗೆ 3,295 ರೂ. ನಿಗದಿಪಡಿಸಲಾಗಿದೆ. ಕೃಷಿ ಇಲಾಖೆಯಿಂದ ನಿಯೋಜಿಸಲ್ಪಟ್ಟ ಗ್ರೇಡರ್​ಗಳು ಕೃಷಿ ಉತ್ಪನ್ನವನ್ನು ಪರೀಕ್ಷಿಸಿ ಖರೀದಿಗೆ ಒಪ್ಪಿಗೆ ಸೂಚಿಸಿದ ನಂತರ ಖರೀದಿ ಏಜೆನ್ಸಿಯ ವ್ಯವಸ್ಥಾಪಕರು ರೈತರಿಗೆ ಖರೀದಿ ಟೋಕನ್ ನೀಡಲು ಹಾಗೂ ಟೋಕನ್​ನಲ್ಲಿ ರೈತನ ಹೆಸರು/ಗ್ರಾಮ/ಬೆಳೆ ಪ್ರಮಾಣ/ಖರೀದಿ ದಿನಾಂಕಗಳನ್ನು ಸ್ವಷ್ಟವಾಗಿ ನಮೂದಿಸಬೇಕು. ರೈತರಿಂದ ಬೆಂಬಲ ಬೆಲೆಯಡಿಯಲ್ಲಿ ರಾಗಿ ಖರೀದಿಸಿದ ನಂತರ ರೈತರ ಬ್ಯಾಂಕ್ ಖಾತೆಗಳಿಗೆ ಆರ್​ಟಿಜಿಎಸ್ ಮೂಲಕ ಹಣ ಪಾವತಿಸಿ ಪಾರದರ್ಶಕತೆ ಕಾಪಾಡಲು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts