ನವದೆಹಲಿ: ಮಧ್ಯರಾತ್ರಿಯಲ್ಲಿ ನಿದ್ದೆಯಲ್ಲಿ ಎದ್ದು ನಡೆಯುವವರನ್ನು ನೋಡಿರುತ್ತೇವೆ, ಕೇಳಿರುತ್ತೇವೆ. ಆದರೆ ಈ ಹುಡುಗ ಮಧ್ಯರಾತ್ರಿಯಲ್ಲಿ ಮಲಗುವುದೇ ಇಲ್ಲ, ಬದಲಿಗೆ ದಿನಾ ಆ ಸಮಯದಲ್ಲಿ ಓಡುತ್ತಾನೆ. ಹತ್ತೊಂಬತ್ತರ ಹರೆಯದ ಈತನ ಒಂದು ಓಟ ಈಗ ಜಗತ್ತೇ ಈತನತ್ತ ನೋಟ ಬೀರುವಂತೆ ಮಾಡಿದೆ. ಮಾತ್ರವಲ್ಲ, ಈಗ ಪರೀಕ್ಷೆಗೂ ಮೊದಲೇ ಸೇನಾಧಿಕಾರಿಯೊಬ್ಬರ ಮನಸ್ಸನ್ನು ಗೆದ್ದಿದ್ದಾನೆ.
ಈ ಓಟದ ಹುಡುಗನ ಹೆಸರು ಪ್ರದೀಪ್ ಮೆಹ್ರ, ಊರು ಉತ್ತರಾಖಂಡ. ಈತ ಸೇನೆಗೆ ಸೇರಬೇಕು ಎಂಬ ಒಂದೇ ಉದ್ದೇಶದಿಂದ ಹಗಲಿನಲ್ಲಿ ಓಡಲು ಸಮಯ ಇಲ್ಲ ಎಂದು ರಾತ್ರಿ ಕೆಲಸ ಮುಗಿಸಿಕೊಂಡು ದಿನಾ ಹತ್ತು ಕಿ.ಮೀ. ಓಡಿಯೇ ಮನೆ ಸೇರುತ್ತಾನೆ. ಸಿನಿಮಾ ನಿರ್ದೇಶಕ ವಿನೋದ್ ಕಪ್ರಿ ಅವರು ಒಮ್ಮೆ ಅನಿರೀಕ್ಷಿತವಾಗಿ ಈತನ ಓಟವನ್ನು ನೋಡಿ, ಮಧ್ಯರಾತ್ರಿಯಲ್ಲಿ ಅಪಾಯಕ್ಕೆ ಸಿಲುಕಿ ಓಡುತ್ತಿರಬೇಕು ಎಂದು ಕಾರಿನಲ್ಲಿ ಹೋಗುತ್ತಲೇ ಓಡುತ್ತಿದ್ದ ಈತನನ್ನು ಮಾತನಾಡಿಸುತ್ತಾರೆ.
ಆಗ ಈ ಯುವಕ ಹಗಲಿನಲ್ಲಿ ಸಮಯವಿಲ್ಲ, ಮೆಕ್ಡೊನಾಲ್ಡ್ನಲ್ಲಿ ಕೆಲಸ ಮಾಡುತ್ತೇನೆ, ರಾತ್ರಿ ದಿನಾ ಓಡಿಯೇ ಮನೆ ಸೇರುತ್ತೇನೆ ಎಂದು ಹೇಳುತ್ತಾನೆ. ಅಮ್ಮ ಆಸ್ಪತ್ರೆಯಲ್ಲಿದ್ದಾನೆ, ನಾನು ಅಣ್ಣನ ಜೊತೆಗಿದ್ದೇನೆ ಎನ್ನುವ ಈ ಯುವಕ, ವಿನೋದ್ ಊಟಕ್ಕೆ ಕರೆದಾಗ ಅಣ್ಣ ನೈಟ್ ಶಿಫ್ಟ್ ಆತ ಹಸಿವಿನಿಂದ ಇರಬೇಕಾಗುತ್ತದೆ, ನಾನು ಮನೆಗೆ ಹೋಗಿ ಅಡುಗೆ ಮಾಡಿಯೇ ಊಟ ಮಾಡುತ್ತೇನೆ ಎನ್ನುತ್ತಾನೆ.
ಈ ವಿಡಿಯೋ ವೈರಲ್ ಆಗುತ್ತದೆ ಎಂದು ವಿನೋದ್ ಹೇಳಿದಾಗ, ನನ್ನನ್ಯಾರು ಗುರುತಿಸುತ್ತಾರೆ, ವೈರಲ್ ಆದ್ರೆ ಆಗಲಿ ಬಿಡಿ, ಕೆಟ್ಟ ಕೆಲಸವನ್ನಂತೂ ಮಾಡುತ್ತಿಲ್ಲ ಎನ್ನುತ್ತಾನೆ. ಆದರೆ ವಿನೋದ್ ಹೇಳಿದಂತೆ ಆ ವಿಡಿಯೋ ವೈರಲ್ ಆಗಿದೆ ಮಾತ್ರವಲ್ಲ, ಇಂದು ಜಗತ್ತಿನ ಗಮನ ಸೆಳೆದಿದ್ದಾನೆ. ಮಾತ್ರವಲ್ಲ ಅದೇ ವಿಡಿಯೋದಿಂದಾಗಿ ಈತ ಸೇನಾಧಿಕಾರಿಯೊಬ್ಬರ ಗಮನಕ್ಕೂ ಬಂದಿದ್ದು, ಪರೀಕ್ಷೆಗೂ ಮೊದಲೇ ಅವರ ಮನಸ್ಸನ್ನು ಗೆದ್ದುಬಿಟ್ಟಿದ್ದಾನೆ.
ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ ಎನ್ನುವವರು, ಲೆಫ್ಟಿನೆಂಟ್ ಜನರಲ್ ರಾಣಾ ಅವರ ಜತೆ ಮಾತನಾಡಿದ್ದು, ಅರ್ಹತೆ ಮೇಲೆ ಈತ ನೇಮಕಾತಿ ಪರೀಕ್ಷೆ ಪಾಸಾಗಲು ಸಕಲ ನೆರವು ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಅದಕ್ಕೆ ಬೇಕಾಗ ಅಗತ್ಯ ಪ್ರಕ್ರಿಯೆಗಳನ್ನು ರಾಣಾ ನಡೆಸಲಿದ್ದಾರೆ ಎಂದೂ ಹೇಳಿದ್ದಾರೆ.
ಮಾ. 20ರಂದು ವಿನೋದ್ ಅವರ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿದ್ದು, 21ರ ರಾತ್ರಿ ಮತ್ತೆ ಪ್ರದೀಪ್ ಮೆಹ್ರ ಅರ್ಧರಾತ್ರಿಯಲ್ಲಿ ಓಡುವಾಗ ಮಾತನಾಡಿ ವಿಡಿಯೋ ಮಾಡಿದ್ದಾರೆ. ಅಂದು ಅವರು ಮತ್ತೊಮ್ಮೆ ತಮ್ಮೊಂದಿಗೆ ಊಟಕ್ಕೆ ಬರುವಂತೆ ಕೋರಿದಾಗ ಈ ಯುವಕ ಕೊನೆಗೂ ಒಂದಷ್ಟು ದೂರ ಓಡಿ ಬರುವುದಾಗಿ ಹೇಳಿದ್ದಾನೆ. ಬಳಿಕ ಆತ ಅತಿವೇಗದಲ್ಲಿ ಓಡುವ ದೃಶ್ಯ ಯಾರಾದರೂ ಮೆಚ್ಚುಗೆ ವ್ಯಕ್ತಪಡಿಸುವಂತಿದೆ.
His Josh is commendable, and to help him pass the recruitment tests on his merit, I've interacted with Colonel of KUMAON Regiment, Lt Gen Rana Kalita, the Eastern Army Commander. He is doing the needful to train the boy for recruitment into his Regiment.
— Lt Gen Satish Dua🇮🇳 (@TheSatishDua) March 21, 2022
Jai Hind 🇮🇳 https://t.co/iasbkQvvII