ಹೆಬ್ರಿ: ಸ್ವಾತಂತ್ರ್ಯ ಮಹೋತ್ಸವದ ಆಚರಣೆ ಮಹತ್ವ ಪಡೆದಿದ್ದು ವಿದ್ಯುತ್ ಸಚಿವಾಲಯದ ಸೂಚನೆಯಂತೆ ವಿದ್ಯುತ್ ಕ್ಷೇತ್ರದ ಸಾಧನೆಗಳನ್ನು ಉತ್ಸವದಂತೆ ಆಚರಿಸಿ ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ ಎಂದು ಎನ್ಟಿಪಿಸಿ ಸಹಾಯಕ ಇಂಜಿನಿಯರ್ ಕೆ.ಪಿ. ರವೀಂದ್ರ ಹೇಳಿದರು.
ಹೆಬ್ರಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕೆಪಿಟಿಸಿಎಲ್, ಉಡುಪಿ ಜಿಲ್ಲಾಡಳಿತ, ಎನ್ಟಿಪಿಸಿ, ಇಂಧನ ಇಲಾಖೆ, ಮೆಸ್ಕಾಂ ಮಂಗಳೂರು ಹಾಗೂ ಕಾರ್ಕಳ ವಿಭಾಗದ ಆಶ್ರಯದಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ, ಉಜ್ವಲ ಭಾರತ ಉಜ್ವಲ ಭವಿಷ್ಯ ವಿದ್ಯುತ್ 2047ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ನಿತ್ಯ ನಾಲ್ಕು ಲಕ್ಷ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಹೆಚ್ಚುವರಿ ವಿದ್ಯುತ್ ವಿವಿಧ ದೇಶಗಳಿಗೆ ಮಾರಾಟ ಮಾಡಲಾಗುತಿದ್ದು ಉತ್ತಮ ಆದಾಯ ಪಡೆಯಲಾಗುತ್ತಿದೆ. ದೇಶದಲ್ಲಿ ಕಾಶ್ಮೀರದ ಲಡಾಕ್ನಿಂದ ತಮಿಳುನಾಡಿನ ಕನ್ಯಾಕುಮಾರಿವರೆಗೆ ಗುಜರಾತಿನ ಕಛ್ನಿಂದ ಬಾಂಗ್ಲಾದೇಶ ಗಡಿವರೆಗೆ ಅತಿದೊಡ್ಡ ವಿದ್ಯುತ್ ಜಾಲವನ್ನು ಹೊಂದಿದ ಪ್ರಪಂಚದಲ್ಲಿ ಅತಿದೊಡ್ಡ ದೇಶವಾಗಿ ಮೂಡಿ ಬಂದಿದೆ ಎಂದರು.
ಬೆಳಕು ಯೋಜನೆ ಫಲಾನುಭವಿ ನಾರಾಯಣ ನಾಡ್ಪಾಲ್ ಮಾತನಾಡಿ ಬೆಳಕು ಯೋಜನೆ ಮೂಲಕ ನಾಡ್ಪಾಲು ಗ್ರಾಮದ 20 ಕ್ಕೂ ಹೆಚ್ಚು ಮನೆಗಳಿಗೆ ಬೆಳಕು ದೊರೆತಿದೆ ಎಂದರು. ಮೆಸ್ಕಾಂ ಮಂಗಳೂರು ವಲಯ ಮುಖ್ಯ ಇಂಜಿನಿಯರ್ ಎಸ್. ಎ ಪುಷ್ಪ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಅಧೀಕ್ಷಕ ಇಂಜಿನಿಯರ್ ನರಸಿಂಹ ಪಂಡಿತ್, ಕಾರ್ಕಳ ವಲಯದ ಕಾರ್ಯನಿರ್ವಾಹಕ ಇಂಜಿನಿಯರ್ ನರಸಿಂಹ, ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸಾದ್ ರಾವ್, ಜಿಲ್ಲಾ ಪಂಚಾಯಿತಿ ನಿಕಟಪೂರ್ವ ಸದಸ್ಯ ಜ್ಯೋತಿ ಹರೀಶ್, ನಾಡ್ಪಾಲ್ ಗ್ರಾಪಂ ದಿನೇಶ್ ಹೆಗ್ಡೆ, ಮುದ್ರಾಡಿ ಗ್ರಾ. ಪಂ ಉಪಾಧ್ಯಕ್ಷೆ ವಸಂತಿ ಪೂಜಾರಿ ಉಪಸ್ಥಿತರಿದ್ದರು. ಹರೀಶ್ ನಾಯಕ್ ನಿರೂಪಿಸಿದರು. ವಿನಾಯಕ ಕಾಮತ್ ಸ್ವಾಗತಿಸಿದರು.