ಬೆಂಗಳೂರು: ರಾಷ್ಟ್ರದಲ್ಲಿ ಶಿಸ್ತು ಮತ್ತು ದಕ್ಷತೆಗೆ ಹೆಸರಾಗಿದ್ದ ರಾಜ್ಯ ಪೊಲೀಸ್ ಇಲಾಖೆ ಅಶಿಸ್ತಿನ ಹಾದಿ ಹಿಡಿದಿದೆ. ಕಷ್ಟ ಹೇಳಲು ಠಾಣೆಗೆ ಬರುವ ಮಹಿಳೆಯರಿಗೆ ಲೈಂಗಿಕ ಕಿರುಕುಳ, ಲಂಚ ಸ್ವೀಕಾರ, ಬೆದರಿಸಿ ಸುಲಿಗೆ, ಅಕ್ರಮ ಬಂಧನ ಸೇರಿ ಒಂದಿಲ್ಲೊಂದು ಆರೋಪದಲ್ಲಿ ಪೊಲೀಸರು ಸಾಲು ಸಾಲು ಅಮಾನತು ಶಿಕ್ಷೆಗಳಿಗೆ ಒಳಗಾಗುತ್ತಿದ್ದಾರೆ. ಪರಿಣಾಮ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆಯಾಗಿದೆ.
ಅಮಾಯಕರಿಗಿಲ್ಲ ರಕ್ಷಣೆ
ಕಡುಬಡವರಿಂದ ಶ್ರೀಮಂತರವರೆಗೂ ಕಷ್ಟದ ಕಾಲದಲ್ಲಿ ಪೊಲೀಸರ ಆಸರೆ ಬಯಸಿ ಠಾಣೆಗಳ ಮೆಟ್ಟಿಲೇರುತ್ತಾರೆ. ಇದಲ್ಲದೆ, ನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಸಂಕಷ್ಟದಲ್ಲಿ ಸಹಾಯ ಕೋರಿ ಠಾಣೆಗೆ ಬರುವ ಅಮಾಯಕರಿಗೆ ರಕ್ಷಣೆ ಕೊಡದೆ ಸಣ್ಣಸಣ್ಣ ಕೆಲಸಕ್ಕೂ ಲಂಚಕ್ಕೆ ಬೇಡಿಕೆ ಒಡ್ಡುತ್ತಿದ್ದಾರೆ.
ಎಫ್ಐಆರ್ ದಾಖಲಿಸಲು ಹಿಂದೇಟು
ಸಣ್ಣಪುಟ್ಟ ಕೇಸಿಗೆ ಎಫ್ಐಆರ್ ದಾಖಲಿಸಲು ಹಿಂದೇಟು ಹಾಕಿ ಲಂಚ ಪಡೆದ ಮೇಲೆ ಕೇಸ್ ಮಾಡುತ್ತಿದ್ದಾರೆ. ವೈಯಕ್ತಿಕ ಜೀವನಕ್ಕೆ ಧಕ್ಕೆಯಾಗಿ, ತನ್ನ ಮೇಲಿನ ದೌರ್ಜನ್ಯದಿಂದ ನೊಂದು ನ್ಯಾಯ ಕೋರಿ ಠಾಣೆಗೆ ಬರುವ ಯುವತಿ ಮತ್ತು ಮಹಿಳೆಯರೊಂದಿಗೆ ಅಸಭ್ಯ ವರ್ತಿಸುವ ಪೊಲೀಸರ ಪಟ್ಟಿ ಬೆಳೆಯುತ್ತಿದೆ. ಸಂತ್ರಸ್ತೆಗೆ ಲೈಂಗಿಕ ಕಿರುಕುಳ ಮತ್ತು ಆಕೆಯನ್ನೇ ಏಕಾಂತಕ್ಕೆ ಕರೆಯುವ ಆರೋಪ ಪೊಲೀಸರ ವಿರುದ್ಧ ಕೇಳಿಬರುತ್ತಿವೆ. ಇತ್ತೀಚೆಗೆ ಇನ್ಸ್ಪೆಕ್ಟರ್ ಮತ್ತು ಎಸ್ಐ ಅಮಾನತುಗೊಂಡಿದ್ದಾರೆ.
ಫೋನ್ ಪೇ ಮೂಲಕ ಲಂಚ
ರಸ್ತೆಗಳಲ್ಲಿ ಸಣ್ಣ ಗೂಡಂಗಡಿಯಿಂದ ಮಾಲ್ನಲ್ಲಿ ಲಂಚಕ್ಕೆ ಕೈಚಾಚುವ ಪೊಲೀಸರ ಸಂಖ್ಯೆ ಕಡಿಮೆ ಇಲ್ಲ. ಜನರು ಸಣ್ಣ ತಪ್ಪು ಮಾಡಿದರೇ ಸಾಕು ಸಮವಸ್ತ್ರದಲ್ಲಿಯೇ ಬೆದರಿಸಿ ಸುಲಿಗೆ ಮಾಡುತ್ತಿದ್ದಾರೆ. ರಾತ್ರಿ ಹೊತ್ತಿನಲ್ಲಿ ಓಡಾಡುವ ಯುವಕ, ಯುವತಿಯರಿಗೆ ತಪಾಸಣೆ ನೆಪದಲ್ಲಿ ತಡೆದು ಬೆದರಿಸಿ ಫೋನ್ ಪೇ ಮೂಲಕವೇ ಲಂಚ ಸ್ವೀಕರಿಸಿ ಸಿಕ್ಕಿ ಬೀಳುತ್ತಿದ್ದಾರೆ.
ಇದನ್ನೂ ಓದಿ: ಎಚ್.ಡಿ.ರೇವಣ್ಣ ನಾಮಪತ್ರ ಸಲ್ಲಿಕೆ; ಪತ್ನಿ ಭವಾನಿ ಬಳಿ ಇದೆ ಕೆಜಿಗಟ್ಟಲೆ ಬೆಳ್ಳಿ-ಬಂಗಾರ
ಅಡ್ಡದಾರಿಯಲ್ಲಿ ಹಣ ಸಂಪಾದನೆ
ಇತ್ತೀಚೆಗೆ ಇಲಾಖೆಗೆ ಸೇರ್ಪಡೆಗೊಂಡಿರುವ ಫೈಬಲ್ ಮತ್ತು ಸಬ್ಇನ್ಸ್ಪೆಕ್ಟರ್ಗಳಲ್ಲಿ ಇಲಾಖೆ ಮೇಲಿನ ಗೌರವ ಮತ್ತು ಶಿಸ್ತು ಮೈಗೂಡಿಸಿಕೊಳ್ಳುವಲ್ಲಿ ವಿಫಲರಾಗಿರುವ ಲಕ್ಷಣಗಳು ಕಂಡುಬರುತ್ತಿವೆ. ವೇತನಕ್ಕಿಂತ ಅಡ್ಡದಾರಿಯಲ್ಲಿ ಹಣ ಸಂಪಾದನೆ ಮಾಡಿ ವಿಲಾಸಿ ಜೀವನ ನಡೆಸುವತ್ತ ಮುಖ ಮಾಡುತ್ತಿದ್ದಾರೆ. ಇದರ ಪರಿಣಾಮ ಪೊಲೀಸರಿಂದಲೇ ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿವೆ.
ಕಳ್ಳಬೆಕ್ಕಿನಂತೆ ವರ್ತನೆ
ಇತ್ತೀಚೆಗೆ ಮಾರತ್ತಹಳ್ಳಿ ಪೊಲೀಸರು, ರೈಸ್ಫುಲಿಂಗ್ ಕೇಸ್ನಲ್ಲಿ ಆರೋಪಿಯನ್ನು ಠಾಣೆಯಲ್ಲಿ ಕೂಡಿಹಾಕಿ 10 ಲಕ್ಷ ರೂ.ಗೆ ಬೇಡಿಕೆ ಒಡ್ಡಿದ್ದರು. ಬೆಳಕಿಗೆ ಬರುತ್ತಿದಂತೆ ಪಿಎಸ್ಐ ಹಾದಿಯಾಗಿ ನಾಲ್ವರು ಅಮಾನತುಗೊಂಡರು. ಉಳಿದ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಈ ಎಲ್ಲವೂ ನೊಂದ ಜೀವಗಳು ಸಾರ್ವಜನಿಕ ವಲಯದಲ್ಲಿ ದೂರು ಸಲ್ಲಿಸಿದಾಗ ಬೆಳಕಿಗೆ ಬಂದ ಪ್ರಕರಣಗಳಷ್ಟೇ. ಸಾಕಷ್ಟು ಪೊಲೀಸರ ದೌರ್ಜನ್ಯ ಮತ್ತು ಸುಲಿಗೆ ಪ್ರಕರಣಗಳು ಬೆಳಕಿಗೆ ಬಾರದೆ ಮುಚ್ಚಿಹೋಗುತ್ತಿವೆ. ಹಿರಿಯ ಅಧಿಕಾರಿಗಳು ಸಹ ತಮ್ಮ ಗಮನಕ್ಕೆ ಬಂದರೂ ದೂರು ಬಂದಿಲ್ಲವೆಂದು ಕಳ್ಳಬೆಕ್ಕಿನಂತೆ ವರ್ತಿಸುತ್ತಿರುವುದು ಪೊಲೀಸ್ ಇಲಾಖೆಯಲ್ಲಿ ಕಾಣಬಹುದಾಗಿದೆ.
ಆನೇಕಲ್ನಲ್ಲಿ ಸಿಲಿಂಡರ್ ಸ್ಫೋಟಕ್ಕೆ ಇಡೀ ಅಂಗಡಿಯೇ ಧ್ವಂಸ: ಓರ್ವ ವ್ಯಕ್ತಿಯ ಸ್ಥಿತಿ ಗಂಭೀರ
ಎಚ್.ಡಿ.ರೇವಣ್ಣ ನಾಮಪತ್ರ ಸಲ್ಲಿಕೆ; ಪತ್ನಿ ಭವಾನಿ ಬಳಿ ಇದೆ ಕೆಜಿಗಟ್ಟಲೆ ಬೆಳ್ಳಿ-ಬಂಗಾರ
ರಾಮದಾಸ್ ಕೂಡ ಬಿಜೆಪಿಗೆ ರಾಜೀನಾಮೆ?; ಮನೆಗೆ ಬಂದ ಸಂಸದ-ಅಭ್ಯರ್ಥಿಯನ್ನು ಭೇಟಿಯಾಗದೆ ವಾಪಸ್ ಕಳಿಸಿದ್ರು!