ಹೈದರಾಬಾದ್: ಹೈದರಾಬಾದ್ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾರ್ಮಿಕ ನಗರದ ಮನೆಯೊಂದರ ಫ್ರಿಡ್ಜ್ನಲ್ಲಿ ಕಳೆದ ಶನಿವಾರ ವ್ಯಕ್ತಿಯೊಬ್ಬನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ನಿಗೂಢ ಪ್ರಕರಣದ ಬೆನ್ನತ್ತಿ ಹೋದ ಪೊಲೀಸರು ಸಾವಿನ ರಹಸ್ಯವನ್ನು ಭೇದಿಸಿದ್ದಾರೆ.
ಕಾರ್ಮಿಕ ನಗರದ ಮನೆಯ ಮಾಲೀಕ ತನ್ನ ಒಂದು ಮನೆಯನ್ನು ಲೀಸ್ಗೆಂದು ನೀಡಿದ್ದ. ಆ ಮನೆ ಕಳೆದ ಕೆಲವು ದಿನಗಳಿಂದ ಲಾಕ್ ಆಗಿತ್ತು. ದಿನ ಕಳೆದಂತೆ ಆ ಮನೆಯಿಂದ ದುರ್ವಾಸನೆ ಬರುವುದನ್ನು ಗಮನಿಸಿದ ಮಾಲೀಕ ಹೆದರಿ, ಪೊಲೀಸರಿಗೆ ಕರೆ ಮಾಡಿದಾಗ ಸಾವಿನ ಪ್ರಕರಣ ಬೆಳಕಿಗೆ ಬಂದಿತ್ತು.
ಇದನ್ನೂ ಓದಿರಿ: ‘ರಾಬರ್ಟ್’ಗೆ ಸಂತೋಷ್; ‘ವಕೀಲ್ ಸಾಬ್’ಗೆ ಭೂಮಿಕಾ
ಫ್ರಿಡ್ಜ್ನಲ್ಲಿ ಪತ್ತೆಯಾದ ಮೃತದೇಹ ಸಿದ್ದಿಖ್ ಅಹ್ಮದ್ (38) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಟೈಲರ್ ಆಗಿದ್ದ ಸಿದ್ದಿಖ್, ತನ್ನ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ. ಎರಡು ದಿನಗಳ ಹಿಂದೆ ಸಿದ್ದಿಖ್ ಪತ್ನಿ ತವರು ಮನೆಗೆ ಹೋಗಿದ್ದಳು. ಇದರ ನಡುವೆ ಮನೆಯಿಂದ ಹೊರಬರುತ್ತಿದ್ದ ದುರ್ವಾಸನೆ ನೋಡಿ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದಾಗ, ಬಂದು ಸ್ಥಳ ಪರಿಶೀಲನೆ ಮಾಡಿದ ಪೊಲೀಸರಿಗೆ ಮನೆಯ ಫ್ರಿಡ್ಜ್ನಲ್ಲಿ ಸಿದ್ದಿಖ್ ಮೃತದೇಹ ಪತ್ತೆಯಾಗಿದೆ.
ನಿಗೂಢ ಪ್ರಕರಣದ ಬೆನ್ನತ್ತಿ ಹೋದ ಪೊಲೀಸರಿಗೆ ಅಕ್ರಮ ಸಂಬಂಧದ ಕತೆ ತೆರೆದುಕೊಂಡಿದ್ದು, ಅಲ್ಲಿಗೆ ಕೊಲೆ ಎಂಬುದು ಖಚಿತವಾಗಿದೆ. ಈ ಕೊಲೆಯನ್ನು ಮೊಹಮ್ಮದ್ ಅಲಿ ಎಂಬಾತ ಎಸಗಿದ್ದಾನೆ. ಕಾರಣ ಈತ ಸಿದ್ದಿಖ್ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇಬ್ಬರು ಸೇರಿ ಸಂಚು ಹೂಡಿ ಕೊಲೆ ಮಾಡಿರುವ ಆರೋಪದ ಮೇಲೆ ಸೋಮವಾರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಅಲಿ ತನ್ನ ಪತ್ನಿ ಜತೆಗಿರುವುದನ್ನು ಸಿದ್ದಿಖ್ ನೇರವಾಗಿ ನೋಡಿದ್ದ. ಇದಾದ ಬಳಿಕ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ. ಹಲವಾರು ಹಲ್ಲೆಯನ್ನು ಮಾಡಿದ್ದ. ಇದನ್ನು ತಾಳಲಾರದೆ ಸಿದ್ದಿಖ್ ಪತ್ನಿ, ಪ್ರಿಯಕರ ಮೊಹಮ್ಮದ್ ಅಲಿ ಸೇರಿ ಸಂಚು ಹೂಡಿ ಗಂಡನನ್ನು ಕೊಂದಿದ್ದಾಳೆ.
ಇದನ್ನೂ ಓದಿರಿ: ಸಮರ್ಪಕ ಚಿಕಿತ್ಸೆ ಸಿಗದೆ ಕರೊನಾ ಸೋಂಕಿಗೆ ಬಲಿಯಾದ ಸ್ಟಾಫ್ನರ್ಸ್; ರಾತ್ರಿ ಪಾಳಿಗೆ ಹಾಜರಾಗದ ವೈದ್ಯರು
ತಮ್ಮ ಯೋಜನೆಯಂತೆ ಸಿದ್ದಿಖ್ ಪತ್ನಿ ತನ್ನ ಮಕ್ಕಳೊಂದಿಗೆ ತವರು ಮನೆಗೆ ಹಬ್ಬಕ್ಕೆಂದು ತೆರಳಿದ್ದಾಳೆ. ಬಳಿಕ ಮೊಹಮ್ಮದ್ ಅಲಿ ಕಬ್ಬಿಣದ ಸಲಾಕೆಯೊಂದಿಗೆ ಸಿದ್ದಿಖ್ ಮನೆಗೆ ಹೋಗಿದ್ದಾನೆ. ಸ್ಕ್ರೂಡ್ರೈವರ್ ಸಹಾಯದಿಂದ ಕಿಟಕಿಗಳನ್ನು ಬಿಚ್ಚಿ ಮನೆಯೊಳಗೆ ಪ್ರವೇಶಿಸಿ ಸಿದ್ದಿಖ್ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಸಿದ್ದಿಖ್ ಅಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.
ಇದಾದ ಬಳಿಕ ಮೃತದೇಹವನ್ನು ಫ್ರಿಡ್ಜ್ ಒಳಗಡೆ ಹಾಕಿ, ಆರೋಪಿ ಅಲಿ ಮನೆಯನ್ನು ಹೊರಗಿನಿಂದ ಲಾಕ್ ಮಾಡಿ, ಅಲ್ಲಿಂದ ಪರಾರಿಯಾಗಿದ್ದ. ಸದ್ಯ ಆರೋಪಿ ಮತ್ತು ಸಿದ್ದಿಖ್ ಪತ್ನಿಯನ್ನು ಬಂಧಿಸಲಾಗಿದ್ದು, ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. (ಏಜೆನ್ಸೀಸ್)
ಬೆಳ್ಳಂಬೆಳಗ್ಗೆ ತಟ್ಟಿದ ಸಾರಿಗೆ ನೌಕರರ ಮುಷ್ಕರ ಬಿಸಿ: ಸರ್ಕಾರಿ ನಿಲ್ದಾಣದಲ್ಲಿ ಖಾಸಗಿ ದರ್ಬಾರ್, ದುಪ್ಪಟ್ಟು ದರ
ಶಾಸಕರ ಪುತ್ರನ ಮೇಲೆಯೇ ಹಲ್ಲೆ; ಕಾರನ್ನು ಹಿಂಬಾಲಿಸಿಕೊಂಡು ಬಂದು ಕಪಾಳಕ್ಕೆ ಹೊಡೆದರು!?