ಬೆಂಗಳೂರು: ಪೊಲೀಸ್ ಶ್ವಾನಪಡೆಯಲ್ಲಿ ಇರುವ ಡಾಬರ್ಮನ್ ಪಿಂಚರ್ ನಾಯಿಗಳು ಸಾಮಾನ್ಯವಾಗಿ ಅಪರಾಧ ನಡೆದಿರುವ ಪ್ರದೇಶದಿಂದ 3ರಿಂದ 5 ಕಿ.ಮೀ ಅಂತರದವರೆಗೆ ಹೋಗುತ್ತವೆ. ಆದರೆ, ದಾವಣಗೆರೆ ಪೊಲೀಸ್ ಶ್ವಾನಪಡೆಯಲ್ಲಿ ಇರುವ ತುಂಗಾ ಎಂಬ ಡಾಬರ್ಮನ್ ಪಿಂಚರ್ ನಾಯಿ 2 ಗಂಟೆಗಳಲ್ಲಿ 12 ಕಿ.ಮೀ. ಓಡಿ, ಕೊಲೆಗಾರನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಚೇತನ್ ಎಂಬಾತ ಬಂಧಿತ. ಈತ ತನ್ನ ಸ್ನೇಹಿತ ಚಂದ್ರಾನಾಯ್ಕ್ ಮತ್ತಿತರರ ಜತೆಗೂಡಿ ಧಾರವಾಡ ಜಿಲ್ಲೆಯ ಮನೆಯೊಂದರಲ್ಲಿ ಕಳವು ಮಾಡಿದ್ದರು. ಒಂದು ಸರ್ವಿಸ್ ರಿವಾಲ್ವರ್ ಅಲ್ಲದೆ, ಅಪಾರ ಪ್ರಮಾಣದ ಚಿನ್ನಾಭರಣವನ್ನು ಕದ್ದಿದ್ದರು. ಚಿನ್ನಾಭರಣವನ್ನು ಎಲ್ಲರೂ ಸಮಾನವಾಗಿ ಹಂಚಿಕೊಂಡಿದ್ದರು. ಆದರೆ, ಚಂದ್ರಾನಾಯ್ಕ್ ತನಗೆ ಹೆಚ್ಚಿನ ಪಾಲು ನೀಡುವಂತೆ ಒತ್ತಾಯಿಸಿದ್ದಲ್ಲದೆ, ಬೆದರಿಕೆಯನ್ನೂ ಹಾಕಿದ್ದ.
ಈ ಹಿನ್ನೆಲೆಯಲ್ಲಿ ಚಂದ್ರಾನಾಯ್ಕನನ್ನು ತೊಟ್ಟಿಲು ಹಳ್ಳದ ಬಳಿಗೆ ಕರೆಯಿಸಿಕೊಂಡು ಚೇತನ್, ಕದ್ದಿದ್ದ ಸರ್ವಿಸ್ ರಿವಾಲ್ವರ್ನಲ್ಲಿ ಶೂಟ್ ಮಾಡಿ, ಚಂದ್ರಾನಾಯ್ಕ್ನನ್ನು ಕೊಂದು ಪರಾರಿಯಾಗಿದ್ದ.
ಇದನ್ನೂ ಓದಿ: 8-10ನೇ ತರಗತಿಗೆ ‘ಚಂದನ’ನಲ್ಲಿ ಬೋಧನೆ- ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ…
ವಿಷಯ ತಿಳಿದ ಪೊಲೀಸರು ಶುಕ್ರವಾರ ರಾತ್ರಿ 9.30ಕ್ಕೆ ಘಟನಾ ಸ್ಥಳಕ್ಕೆ ತುಂಗಾಳೊಂದಿಗೆ ಬಂದು ತಲುಪಿದ್ದರು. ಆ ಸ್ಥಳದಲ್ಲಿದ್ದ ವಾಸನೆ ಗ್ರಹಿಸಿದ ತುಂಗಾ ತಕ್ಷಣವೇ ಓಡಲಾರಂಭಿಸಿದ್ದಳು. ಬಳಿಕ ಕಾಶಿಪುರ ತಾಂಡಾದಲ್ಲಿನ ವೈನ್ಶಾಪ್ಗೆ ಹೋದ ಆಕೆ, ಅಲ್ಲಿಂದ ಹೋಟೆಲ್ಗೆ ಹೋಯಿತು. ಅಲ್ಲಿಂದ ಹೊರಟ ತುಂಗಾ ಸ್ವಲ್ಪ ದೂರದಲ್ಲಿದ್ದ ಮನೆಯ ಬಳಿ ನಿಂತು ಬೊಗಳಲಾರಂಭಿಸಿತು.
ರಾತ್ರಿ 12.30ರಲ್ಲಿ ಆ ಮನೆಯ ಮುಂದೆ ನಿಂತ ತುಂಬಾ ಜೋರಾಗಿ ಬೊಗಳಲು ಆರಂಭಿಸಿದಳು. ಆ ಮನೆಯು ಚೇತನ್ನ ಸಂಬಂಧಿಕರದ್ದಾಗಿತ್ತು. ಆತ ಆ ಮನೆಯಲ್ಲಿದ್ದು ಮೊಬೈಲ್ನಲ್ಲಿ ಮಾತನಾಡುತ್ತಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತ ಕೊಲೆ ಮತ್ತು ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡ ಎಂದು ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ತಿಳಿಸಿದ್ದಾರೆ.
ಯಾವುದೇ ಅಪರಾಧ ಪತ್ತೆ ಮಾಡಲು ಪೊಲೀಸ್ ನಾಯಿಗಳು ಗರಿಷ್ಠ 8 ಕಿ.ಮೀ.ವರೆಗೆ ಹೋಗುತ್ತವೆ. ಆದರೆ ತುಂಗಾ 12 ಕಿ.ಮೀ. ದೂರದವರೆಗೆ ಹೋಗಿ ಬಂದಿದ್ದಾಳೆ. ನನ್ನ ಸೇವಾವಧಿಯಲ್ಲಿ ಇಂಥ ಸಾಮರ್ಥ್ಯದ ಪೊಲೀಸ್ ನಾಯಿಯನ್ನು ನೋಡುತ್ತಿರುವುದು ಇದೇ ಮೊದಲು ಎಂದು ತುಂಗಾಳ ಹ್ಯಾಂಡ್ಲರ್ ಪ್ರಕಾಶ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಎಸ್ಪಿ ತುಂಗಾ ಹಾಗೂ ಅದರ ಹ್ಯಾಂಡ್ಲರ್ ಪ್ರಕಾಶ್ ಅವರನ್ನು ಅಭಿನಂದಿಸಿದರು.
ಪವನ್ ಕಲ್ಯಾಣ್ ಅಭಿಮಾನಿಗಳ ವಿರುದ್ಧ ದೂರು ನೀಡಿದ ಟಾಲಿವುಡ್ ಕಾಮಿಡಿಯನ್ ಅಲಿ!