ಗುರುಗ್ರಾಮ: ಮಧ್ಯೆ ಮಾತನಾಡಿ ಅಡ್ಡಿಪಡಿಸಬೇಡ ಎಂದಿದ್ದಕ್ಕೆ ಪೊಲೀಸ್ ಕಾನ್ಸ್ಟೆಬಲ್ ಓರ್ವ ತನಗಿಂತ ಹಿರಿಯ ಅಧಿಕಾರಿಯಾಗಿರುವ ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆ ಮಾಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸ್ ಮೂಲಗಳು ಶುಕ್ರವಾರ ತಿಳಿಸಿವೆ.
ಗುರುಗ್ರಾಮದ ಸೆಕ್ಟರ್ 37 ಪೊಲೀಸ್ ಠಾಣೆಯ ಎಎಸ್ಐ ಪೂನಂ ಮತ್ತು ಕಾನ್ಸ್ಟೆಬಲ್ ಪ್ರವೇಶ್ ನಡುವೆ ಬುಧವಾರ ರಾತ್ರಿ ಗಲಾಟೆ ನಡೆದಿದೆ. ಅತ್ಯಾಚಾರ ಪ್ರಕರಣದ ದೂರುದಾರರ ಜತೆ ಮಾತನಾಡುವಾಗ ಮಧ್ಯ ಮಾತನಾಡಬೇಡ ಎಂದಿದ್ದಕ್ಕೆ ಎಎಸ್ಐ ಮೇಲೆ ಕಾನ್ಸ್ಟೇಬಲ್ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: ಪಿಎಫ್ಐ, ಎಸ್ ಡಿಪಿಐ ಜತೆ ಕಾಂಗ್ರೆಸ್ ಆಂತರಿಕ ಒಪ್ಪಂದವೇನು?: ಬಿಜೆಪಿ ರಾಷ್ಟ್ರೀಯ ವಕ್ತಾರ
ಕೊಲೆ ಬೆದರಿಕೆ
ಇಬ್ಬರ ನಡುವಿನ ಜಗಳ ಉಲ್ಬಣಗೊಂಡು, ಕಾನ್ಸ್ಟೆಬಲ್ ಪ್ರವೇಶ್, ಎಎಸ್ಐಗೆ ಪೂನಂಗೆ ಕೊಲೆ ಬೆದರಿಕೆ ಸಹ ಹಾಕಿದರು. ಆದರೆ ಸ್ಥಳದಲ್ಲಿದ್ದ ಇತರ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಜಗಳವನ್ನು ತಡೆದರು. ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿದಾಗ, ಎಸಿಪಿ ಶ್ರೇಣಿಯ ಅಧಿಕಾರಿ ಪೊಲೀಸ್ ಠಾಣೆಗೆ ಆಗಮಿಸಿ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದರು.
ಎಸ್ಎಚ್ಒ ವರ್ಗಾವಣೆ
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಸೆಕ್ಟರ್ 37 ಪೊಲೀಸ್ ಠಾಣೆಯ ಎಸ್ಎಚ್ಒ ಆಗಿದ್ದ ಇನ್ಸ್ಪೆಕ್ಟರ್ ಸುನೀತಾ ಅವರನ್ನು ಪೊಲೀಸ್ ಲೈನ್ಗೆ ವರ್ಗಾಯಿಸಲಾಗಿದೆ ಮತ್ತು ಇನ್ಸ್ಪೆಕ್ಟರ್ ಅಮನ್ ಬೇನಿವಾಲ್ ಅವರನ್ನು ಎಸ್ಎಚ್ಒ ಆಗಿ ನೇಮಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: 500 ದಿನ ಒಬ್ಬರೇ ಗುಹೆ ಒಳಗೆ ಇದ್ದ ಪರ್ವತಾರೋಹಿ! ಹೊರಗೆ ಬರುತ್ತಲೇ ಹೇಳಿದ್ದೇನು?
ದೂರು ದಾಖಲು
ಗುರುವಾರ ಕಾನ್ಸ್ಟೆಬಲ್ ಪ್ರವೇಶ್ ವಿರುದ್ಧ ಎಎಸ್ಐ ಪೂನಂ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಸೆಕ್ಟರ್ 10 ಎ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಗಾಯ ಉಂಟುಮಾಡುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಹೆಚ್ಚಿನ ತನಿಖೆ ನಡೆಯುತ್ತಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್)
ಸೂಕ್ತ ಸಮಯಕ್ಕೆ ಆಗಮಿಸಿ ಮಹಿಳೆಯ ಪ್ರಾಣ ಉಳಿಸಿದ ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ
ಶಿಗ್ಗಾಂವಿಯಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ