ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿಯವರು ಏ.5ರಂದು ರಾತ್ರಿ 9ಗಂಟೆಗೆ 9 ನಿಮಿಷಗಳ ಕಾಲ ದೀಪ ಹಚ್ಚೋಣ, ಈ ಮೂಲಕ ಕರೊನಾ ವೈರಸ್ ಎಂಬ ಅಂಧಕಾರದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಎಂದು ಕರೆ ನೀಡಿದ್ದಾರೆ.
ಮೋದಿಯವರ ಈ ದೀಪ ಹಚ್ಚುವ ಪರಿಕಲ್ಪನೆ ಸದ್ಯದ ಟೀಕಾ ವಿಷಯವಾಗಿ ಮಾರ್ಪಟ್ಟಿದೆ. ಹಲವು ರಾಜಕೀಯ ಮುಖಂಡರು, ಜನಸಾಮಾನ್ಯರು ತಮ್ಮದೇ ರೀತಿಯಲ್ಲಿ ವ್ಯಂಗ್ಯವಾಡುತ್ತ, ವಿಶ್ಲೇಷಣೆ ಮಾಡುತ್ತಿದ್ದಾರೆ. ಇದರಿಂದೇನು ಪ್ರಯೋಜನೆ ಎಂದು ಪ್ರಶ್ನಿಸುತ್ತಿದ್ದಾರೆ.
ಈ ಮಧ್ಯೆ ಮೋದಿ ಏನೇ ಮಾಡಿದರೂ ಕ್ಯಾತೆ ತೆಗೆಯುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ದೀದಿ (ಮಮತಾ ಬ್ಯಾನರ್ಜಿ) ಸ್ವಲ್ಪ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಸ್ವಲ್ಪ ಖಾರವಾಗಿಯೇ ಉತ್ತರಿಸಿದ ದೀದಿ, ನಾನ್ಯಾಕೆ ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಮಾಡಲಿ? ಇದರಲ್ಲಿ ರಾಜಕೀಯವನ್ನು ಬೆರೆಸಲು ಯತ್ನಿಸುತ್ತಿದ್ದೀರಾ? ನಾನು ಕರೊನಾ ವೈರಸ್ ಪರಿಸ್ಥಿತಿಯನ್ನು ನಿಭಾಯಿಸಬೇಕು. ಈ ಸಂದರ್ಭದಲ್ಲಿ ನೀವು ರಾಜಕೀಯ ಯುದ್ಧಕ್ಕೆ ಪ್ರಚೋದನೆ ನೀಡಬೇಡಿ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ದೀಪ ಬೆಳಗಲು ಹೇಳಿದ್ದು ಒಳ್ಳೆಯದು ಎಂದೆನಿಸಿದವರು ಅದನ್ನು ಪಾಲಿಸಲಿ. ಆ ಹೊತ್ತಲ್ಲಿ ನನಗೆ ನಿದ್ದೆ ಮಾಡಬೇಕು ಎನ್ನಿಸಿದರೆ ನಾನು ಅದನ್ನು ಮಾಡುತ್ತಾನೆ ಎಂದು ಹೇಳಿದ್ದಾರೆ.
ಮೋದಿಯವರು ತಮ್ಮ ಮನಸಲ್ಲಿ ಏನಿದೆಯೋ ಅದನ್ನು ಮಾತನಾಡುತ್ತಾರೆ. ನಾನು ನನಗೇನು ಮಾಡಬೇಕು ಎನ್ನಿಸುತ್ತದೆಯೋ ಅದನ್ನು ಮಾಡುತ್ತೇನೆ. ಇದು ಅವರವರ ವೈಯಕ್ತಿಕ ನಿರ್ಧಾರ ಎಂದಿದ್ದಾರೆ.
ಹಾಗೇ, ಲಾಕ್ಡೌನ್ನಿಂದ ಪಶ್ಚಿಮ ಬಂಗಾಳದಲ್ಲಿ ಅದೆಷ್ಟೋ ಸಾವಿರ ಕೋಟಿ ನಷ್ಟವಾಗಿದೆ. ನಾವೂನು ಗಳಿಸುತ್ತಿಲ್ಲ, ಬದಲಿಗೆ ಇದ್ದಿದ್ದೆಲ್ಲ ಖಾಲಿಯಾಗುತ್ತಿದೆ. ಆದರೂ ನಮ್ಮ ರಾಜ್ಯದ ಎಲ್ಲ ಉದ್ಯೋಗಿಗಳಿಗೆ ತಿಂಗಳ ಮೊದಲ ದಿನವೇ ಸಂಬಳ ನೀಡಿದ್ದೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)