ಜೈಪುರ: ಅರ್ಥ ವ್ಯವಸ್ಥೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿಯಾದ ಜ್ಞಾನವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು ಹಳೆಯ ಮಾನದಂಡಗಳನ್ನು ಉಪಯೋಗಿಸುತ್ತಿರುವುದರಿಂದ ಭಾರತದ ಒಟ್ಟು ದೇಶಿಯ ಉತ್ಪನ್ನ(ಜಿಡಿಪಿ) ಶೇ 2.5ರ ಮಂದಗತಿಯ ಬೆಳವಣಿಗೆಯಲ್ಲಿ ಸಾಗುತ್ತಿದೆ. ಈ ಮೂಲಕ ಪ್ರಧಾನಿ ಮೋದಿ ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರಣವನ್ನು ನಾಶ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಯುಪಿಎ ಅವಧಿಯಲ್ಲಿ ಭಾರತದ ಜಿಡಿಪಿ ಶೇ. 9 ರಷ್ಟಿತ್ತು. ಇಡೀ ವಿಶ್ವವೇ ನಮ್ಮತ್ತ ತಿರುಗಿ ನೋಡುತ್ತಿತ್ತು ಎಂದಿರುವ ರಾಹುಲ್, ಬಹುಶಃ ಪ್ರಧಾನಿ ಮೋದಿ ಆರ್ಥಶಾಸ್ತ್ರ ಅಧ್ಯಯನ ಮಾಡದೇ ಇರಬಹುದು ಅಥವಾ ಅರ್ಥ ಮಾಡಿಕೊಳ್ಳದೇ ಇರಬಹುದು, ಇದರಿಂದಲೇ ಆರ್ಥಿಕತೆ ಮಂದಗತಿಯಲ್ಲಿದೆ ಎಂದು ದೂರಿದ್ದಾರೆ.
ಪ್ರಧಾನಿ ಮೋದಿಗೆ ಜಿಎಸ್ಟಿ ಅಂದರೆ ಏನು ಎಂಬುದು ಸಹ ತಿಳಿದಿಲ್ಲ. ನೋಟ್ ಬ್ಯಾನ್ ಮಾಡಿ ಏನು ಪ್ರಯೋಜನ ಪಡೆದರು. ನೋಟ್ ಬ್ಯಾನ್ನಿಂದ ಒಳ್ಳೆಯದಕ್ಕಿಂತ ತೊಂದರೆಯೇ ಹೆಚ್ಚಾಯಿತು ಎಂದು 8 ವರ್ಷದ ಬಾಲಕ ಕೂಡ ಹೇಳುತ್ತಾನೆ ಎಂದು ಜರಿದರು. (ಏಜೆನ್ಸೀಸ್)