ಬೆಂಗಳೂರು: ರಾಜ್ಯದಲ್ಲಿ ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ರಾಜ್ಯದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೊಮ್ಮಘಟ್ಟದಲ್ಲಿ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರ ರಾಜ್ಯದ ಅಭಿವೃದ್ಧಿಗಳಿಗೆ ಭರವಸೆ ನೀಡಿತ್ತು. ಆ ಭರವಸೆಗಳಿಗೆ ಇಂದು ನಾವೆಲ್ಲಾ ಸಾಕ್ಷಿಯಾಗಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಹಲವು ಮೂಲ ಸೌಕರ್ಯ ಜಾರಿಯಾಗುತ್ತಿದೆ. ಹೀಗಾಗಿ ನನಗೆ ತುಂಬಾ ಸಂತಸವಾಗುತ್ತಿದೆ. ನಿಮ್ಮ ಸೇವೆ ನಾವು ಸದಾ ಸಿದ್ಧರಿದ್ದೇವೆ. ಕರ್ನಾಟಕದಲ್ಲಿ 5 ರಾಷ್ಟ್ರೀಯ ಹೆದ್ದಾರಿ ಪ್ರಾಜೆಕ್ಟ್ ಹಾಗೂ 7 ರೈಲು ಯೋಜನೆಗಳಿಗೆ ಚಾಲನೆ ಸೇರಿದಂತೆ ಒಟ್ಟು 27 ಸಾವಿರ ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದ್ದೇವೆ. ಖಾಸಗಿ ವಲಯಕ್ಕೂ ನಾನು ಪ್ರಶಂಸಿಸುತ್ತೇನೆ. ನಾನು ನಿಮ್ಮ ಸಂಭ್ರಮದಲ್ಲಿ ಭಾಗಿಯಾಗಲು ಬಂದಿದ್ದೇನೆ ಎಂದರು. ಇಲ್ಲಿಂದ ಏನೋ ಹೊಸದನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಉತ್ಸಾಹದಿಂದ ಆಚರಿಸಲು ನೀವು ಬಂದಿದ್ದೀರಿ ಎಂದು ಜನರನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.
ಕರ್ನಾಟಕದಲ್ಲಿ 1200 ಕಿ.ಮೀ ಗೂ ಹೆಚ್ಚಿನವರೆಗೆ ವಿವಿಧ ರೈಲು ಕಾಮಗಾರಿ ಮಾಡಲಾಗಿದೆ. ಕರೊನಾ ವೇಳೆ ಬೆಂಗಳೂರಿನಲ್ಲಿ ಇರುವ ನಮ್ಮ ಯುವ ಸಮೂಹ ಉತ್ತಮ ಸೇವಾಕಾರ್ಯ ಮಾಡಿದ್ದಾರೆ. ಬೆಂಗಳೂರಿಗೆ ಜನರ ಮನಸ್ಥಿತಿ ಬದಯಲಾಯಿಸುವ ಶಕ್ತಿ ಇದೆ. ಜಗತ್ತಿನ ಮುಂಚೂಣಿ ನಗರಗಳಲ್ಲಿ ಒಂದಾಗಿರುವ ಬೆಂಗಳೂರು ಉದ್ಯೋಗ ಸೃಷ್ಟಿ, ನವೋದ್ಯಮಗಳ ಸೃಷ್ಟಿ ಮಾಡುವ ನಗರವಾಗಿದೆ ಎಂದು ಬೆಂಗಳೂರನ್ನು ಹಾಡಿ ಹೊಗಳಿದರು.