ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿಯವರು ಕೋಲ್ಕತ್ತ ಪೋರ್ಟ್ ಟ್ರಸ್ಟ್ಗೆ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಪೋರ್ಟ್ ಎಂದು ಮರುನಾಮಕರಣ ಮಾಡುವುದಾಗಿ ಇಂದು ಘೋಷಿಸಿದರು.
ಭಾರತೀಯ ಜನತಾ ಸಂಘದ (ಈಗಿನ ಭಾರತೀಯ ಜನತಾ ಪಾರ್ಟಿ ಬಿಜೆಪಿ)) ಸಂಸ್ಥಾಪಕರಾಗಿರುವ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಮೂಲತಃ ಕೋಲ್ಕತ್ತದವರೇ ಆಗಿದ್ದಾರೆ. ಇಂದು ಕೋಲ್ಕತ್ತ ಪೋರ್ಟ್ ಟ್ರಸ್ಟ್ನ 150ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿಯವರು ಮಹತ್ವದ ನಿರ್ಧಾರವನ್ನು ಘೋಷಿಸಿದ್ದಾರೆ.
ಕೋಲ್ಕತ್ತ ಪೋರ್ಟ್ ಟ್ರಸ್ಟ್ನ 150ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಬಂಗಾಳದ ಜನತೆಗೆ ಇಂದು ಮಹತ್ವದ ದಿನ. ಇದೊಂದು ಐತಿಹಾಸಿಕ ಬಂದರು. ಅಂದು ಭಾರತಕ್ಕೆ ಬಂದ ಸ್ವಾತಂತ್ರ್ವನ್ನೂ ನೋಡಿದರುವ ಈ ಬಂದರು, ಇಂದು ದೇಶದ ಅಭಿವೃದ್ಧಿಗೂ ಸಾಕ್ಷಿಯಾಗುತ್ತಿದೆ. ಇನ್ನು ಮುಂದೆ ಕೋಲ್ಕತ್ತ ಪೋರ್ಟ್ ಟ್ರಸ್ಟ್ನ್ನು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಬಂದರು ಎಂದು ಹೆಸರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕೈಗಾರಿಕೆ, ಆಧ್ಯಾತ್ಮಿಕ ಮತ್ತು ಸ್ವಾವಲಂಬನೆಯನ್ನು ಪ್ರತಿನಿಧಿಸುವ ಈ ಬಂದರು 150ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ನಾವದನ್ನು ಇನ್ನಷ್ಟು ವಿಶೇಷವಾಗಿಸಬೇಕು. ನವ ಭಾರತದ ಒಂದು ಶಕ್ತಿಶಾಲಿ ಸಂಕೇತವನ್ನಾಗಿ ಮಾಡಬೇಕು ಎಂದು ತಿಳಿಸಿದರು.
ಕೋಲ್ಕತ್ತ ಪೋರ್ಟ್ ಟ್ರಸ್ಟ್ನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲ್ಗೊಳ್ಳಲಿಲ್ಲ. ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಬಳಿಕ ಮತ್ತೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. (ಏಜೆನ್ಸೀಸ್)