ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಶುರುವಾಗಲಿದೆ. ಇದಕ್ಕಾಗಿ ಸಂಸತ್ ಭವನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಯೋಧರ ಬೆನ್ನಿಗೆ ನಾವೆಲ್ಲರೂ ಇದ್ದೇವೆ ಎಂಬ ಮಹತ್ವದ ಸಂದೇಶವನ್ನು ಸಂಸತ್ ಈ ಸಂದರ್ಭದಲ್ಲಿ ಒಕ್ಕೊರಲಿನಿಂದ ನೀಡಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.
ಕೋವಿಡ್ ಕಾರಣಕ್ಕೆ ಬಜೆಟ್ ಅಧಿವೇಶನವನ್ನು ನಿಗದಿತ ಸಮಯಕ್ಕೆ ಮೊದಲೇ ನಿಲ್ಲಿಸಬೇಕಾಗಿ ಬಂತು. ಈಗಲೂ ಅಷ್ಟೇ- ಅಧಿವೇಶನವನ್ನು ಲೋಕಸಭೆ ಮತ್ತು ರಾಜ್ಯಸಭೆ ಕಲಾಪವನ್ನು ಬೇರೆ ಬೇರೆ ಸಮಯದಲ್ಲಿ ನಡೆಸಬೇಕಾಗಿ ಬಂದಿದೆ. ಸಂಸತ್ ಕಲಾಪದಲ್ಲಿ ಎಷ್ಟು ಮಹತ್ವದ ವಿಷಯಗಳು ಚರ್ಚೆ ಆಗುತ್ತವೆ. ಹೊಸ ಹೊಸ ವಿಷಯಗಳು ಚರ್ಚೆಗೆ ಬರುತ್ತವೆಯೋ ಅಷ್ಟು ಉತ್ತಮ. ಅವೆಲ್ಲದರ ಲಾಭ ದೇಶಕ್ಕೇ ಆಗುತ್ತದೆ. ಈ ಸಲವೂ ಆ ಮಹಾಪರಂಪರೆ ಮುಂದುವರಿಯಲಿದೆ. ನಾವೆಲ್ಲ ಸಂಸದರೂ ಸೇರಿ ಅದರ ಮೌಲ್ಯ ವರ್ಧನೆ ಮಾಡುತ್ತೇವೆ ಎಂಬ ವಿಶ್ವಾಸದಲ್ಲಿದ್ದೇವೆ.
ಇದನ್ನೂ ಓದಿ: ಲಡಾಕ್ ಮುಖಭಂಗಕ್ಕೆ ಭಯಾನಕ ಸೇಡು ತೀರಿಸಬಹುದು ಕ್ಸಿ ಜಿನ್ಪಿಂಗ್ ಎನ್ನುತ್ತಿವೆ ವರದಿಗಳು
ಕೋವಿಡ್ ಸೋಂಕು ಹರಡದಂತೆ ತಡೆಯಲು ಈಗಾಗಲೇ ಕೆಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಅವೆಲ್ಲವನ್ನು ನಾವು ಕೂಡ ಪಾಲಿಸಬೇಕು. ಎಲ್ಲಿಯ ತನಕ ಔಷಧ ಇಲ್ಲವೋ ಅಲ್ಲಿ ತನಕ ನಾವಿದನ್ನು ಪಾಲಿಸಲೇ ಬೇಕು. ಬೇರೆ ದಾರಿ ಇಲ್ಲ. ಜಗತ್ತಿನ ಯಾವುದೇ ಭಾಗದಲ್ಲೇ ಆಗಲಿ ಇದಕ್ಕೆ ಒಂದು ಔಷಧ/ಲಸಿಕೆ ಬೇಗನೆ ಸಿಗುವಂತಾಗಲಿ ಎಂದು ನಾವು ಆಶಿಸುತ್ತೇವೆ.
ಇದೇ ರೀತಿ, ನಮ್ಮ ಯೋಧರು ಗಡಿಭಾಗದಲ್ಲಿ ಎಚ್ಚರದಿಂದಿದ್ದು ದೇಶ ರಕ್ಷಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಈ ಸಂಸತ್ತಿನ ಮೇಲೆ ವಿಶೇಷ ಹೊಣೆಗಾರಿಕೆ ಇದೆ. ಈ ಸಲದ ಕಲಾಪದಲ್ಲೂ ಅದು ಮುಂದುವರಿಯಲಿದೆ. ಯಾವ ವಿಶ್ವಾಸದಿಂದ ಅವರು ಅಲ್ಲಿ ಚಳಿ, ಬಿಸಿಲು, ಮಳೆಗಳನ್ನು ಲೆಕ್ಕಿಸದೇ ದುರ್ಗಮ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೋ ಅದನ್ನು ಹೆಚ್ಚಿಸುವುದಕ್ಕೆ ಈ ಸದನವೂ, ಸದನದ ಪ್ರತಿಯೊಬ್ಬ ಸದಸ್ಯನೂ ಒಕ್ಕೊರಲಿನಿಂದ, ಒಂದೇ ಭಾವದೊಂದಿಗೆ, ಒಂದೇ ಭಾವನೆಯೊಂದಿಗೆ ಒಂದೇ ಸಂಕಲ್ಪದೊಂದಿಗೆ ಅವರ ಬೆನ್ನಿಗೆ ಸಂಸತ್ತು ಈ ದೇಶ ನಿಂತಿದೆ ಎಂಬ ಮಹತ್ವದ ಸಂದೇಶವನ್ನು ನೀಡಲಿದೆ ಎಂಬ ವಿಶ್ವಾಸ ನಮ್ಮದು. (ಪಿಎಂಒ)