ಬೆಂಗಳೂರು: ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನೆಗಳಿಗೆ ಆಧುನಿಕ ಜಗತ್ತು ಬೆಸೆದುಕೊಂಡಿದ್ದು, ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರಮದ ಮೂಲಕ ಹೊಸ ವರ್ಷದ ಮೊದಲನೇ ಕಾರ್ಯಕ್ರಮ ಆರಂಭಿಸಿರುವುದು ನನಗೆ ಸಂತಸ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.
ರಾಜ್ಯ ರಾಜಧಾನಿಯ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಮಾತನಾಡಿದರು.
ವಿಜ್ಞಾನ ಮತ್ತು ಸಂಶೋಧನಾ ಕೊಂಡಿಯಾಗಿರುವ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ತುಂಬಾ ಸಂತಸ ಉಂಟುಮಾಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಅಭಿವೃದ್ಧಿಯ ಮೇಲೆ ಧನಾತ್ಮಕ ಮತ್ತು ಆಶಾವಾದ ಭಾವನೆ ಹೊಂದುವ ಮೂಲಕ 2020ನೇ ಹೊಸ ವರ್ಷವನ್ನು ಆರಂಭಿಸಿದರೆ, ಅದು ನಮ್ಮ ಕನಸನ್ನು ನೆರವೇರಿಸುವುದರ ಕಡೆ ತೆಗೆದುಕೊಂಡೊಗುತ್ತದೆ ಎಂದರು.
ಆವಿಷ್ಕಾರ ಸೂಚ್ಯಂಕದಲ್ಲಿ 52ನೇ ಸ್ಥಾನ ಪಡೆಯುವ ಮೂಲಕ ಭಾರತ ರ್ಯಾಂಕಿಂಗ್ ಸುಧಾರಿಸಿರುವನ್ನು ಕೇಳಿ ಸಂತೋಷವಾಯಿತು. ಕಳೆದ 50 ವರ್ಷಗಳಿಗಿಂತ ಕಳೆದ 5 ವರ್ಷಗಳ ನಮ್ಮ ಅವಧಿಯಲ್ಲಿ ನಮ್ಮ ಯೋಜನೆಗಳು ತಂತ್ರಜ್ಞಾನ ಆಧಾರಿತ ವ್ಯವಹಾರವನ್ನು ಹೆಚ್ಚಿಸಿದೆ ಎಂದು ಸರ್ಕಾರದ ಕಾರ್ಯವನ್ನು ಶ್ಲಾಘಿಸಿದರು.
ಆವಿಷ್ಕಾರ, ಪೇಟೆಂಟ್, ಉತ್ಪನ್ನ ಮತ್ತು ಏಳಿಗೆ ಈ ನಾಲ್ಕು ಹೆಜ್ಜೆಗಳು ನಮ್ಮ ದೇಶವನ್ನು ವೇಗದ ಅಭಿವೃದ್ಧಿಯೆಡೆಗೆ ಕೊಂಡೊಯ್ಯಲಿದೆ. ಇದು ನಮ್ಮ ದೇಶದ ಯುವ ವಿಜ್ಞಾನಿಗಳಿಗೆ ನಾನು ಬೋಧಿಸುವ ಧೇಯ್ಯ ವಾಕ್ಯವಾಗಿದೆ ಎಂದು ಹೇಳಿದರು.
ಚಂದ್ರಯಾನ-2 ಸಮಯದಲ್ಲಿಯೂ ಬೆಂಗಳೂರಿಗೆ ಬಂದಿದ್ದೆ. ಈ ವೇಳೆ ಇಡೀ ದೇಶದ ಜನರು ಕಣ್ಣು ಚಂದ್ರಯಾನದ ಮೇಲೆ ನೆಟ್ಟಿತ್ತು. ಅಂದು ನಮ್ಮ ದೇಶದ ಜನರು ವಿಜ್ಞಾನ, ಬಾಹ್ಯಾಕಾಶ ಕಾರ್ಯಕ್ರಮ ಮತ್ತು ನಮ್ಮ ವಿಜ್ಞಾನಿಗಳ ಬಲವನ್ನು ಸಂಭ್ರಮಿಸಿದ ಕ್ಷಣ ಯಾವಾಗಲೂ ನಮ್ಮ ಮನಸ್ಸಿನಲ್ಲಿ ಉಳಿಯುತ್ತದೆ ಎಂದರು.
ಆವಿಷ್ಕಾರ ಮಾಡಲು ಇಡೀ ವಿಶ್ವವೇ ಬೆಂಗಳೂರಿನತ್ತ ಬರುತ್ತಿದೆ. ಅಭಿವೃದ್ಧಿಗಾಗಿ ಈ ನಗರ ಉತ್ತಮವಾದ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಪ್ರತಿಯೊಬ್ಬ ಯುವ ವಿಜ್ಞಾನಿ, ಸಂಶೋಧಕ ಮತ್ತು ಇಂಜಿನಿಯರ್ ಈ ನಗರದೊಂದಿಗೆ ಸಂಪರ್ಕ ಹೊಂದಲು ಬಯಸುತ್ತಾರೆ ಎಂದು ಪ್ರಧಾನಿ ಹೇಳಿದರು.
WATCH: PM Modi speaks at 107th session of Indian Science Congress, in Bengaluru. https://t.co/orLz1ZZGA9
— ANI (@ANI) January 3, 2020