ಬಲಿಯಾ: ಗಡಿಯಲ್ಲಿ ನಿರಂತರ ಕ್ಯಾತೆ ತೆಗೆಯುತ್ತಿರುವ ಚೀನಾ ಮತ್ತು ಪಾಕಿಸ್ತಾನದೊಂದಿಗೆ ಯಾವಾಗ ಯುದ್ಧ ನಡೆಯಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧರಿಸಿದ್ದಾರೆ ಎಂದು ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ನೀಡಿರುವ ಹೇಳಿಕೆ ಈಗ ವಿವಾದ ಸೃಷ್ಟಿಸಿದೆ.
ಈಗಾಗಲೇ ಚೀನಾ ಮತ್ತು ಭಾರತ ನಡುವಿನ ವಾಸ್ತವ ಗಡಿ ನಿಯಂತ್ರಣಾ ರೇಖೆಯಲ್ಲಿ ಉದ್ವಿಘ್ನ ಪರಿಸ್ಥಿತಿ ಇದೆ. ಇದೇ ಸಂದರ್ಭದಲ್ಲಿ ಶುಕ್ರವಾರ ದೇವ್ ಸಿಂಗ್ ಈ ಹೇಳಿಕೆ ನೀಡಿರುವುದು ಭಾರಿ ಚರ್ಚೆ ಹುಟ್ಟು ಹಾಕಿದೆ.
ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ಸಂವಿಧಾನ 370 ಆರ್ಟಿಕಲ್ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ವಿಷಯಕ್ಕೂ ತಮ್ಮ ಹೇಳಿಕೆಯನ್ನು ಲಿಂಕ್ ಮಾಡಿ ಮಾತನಾಡಿದ್ದಾರೆ.
ಇದನ್ನೂ ಓದಿ: ಕಾಳಿ ಮಾತೆಯನ್ನು ಒಲಿಸೋದಕ್ಕಾಗಿ ನಾಲಿಗೆಯನ್ನೇ ಕತ್ತರಿಸಿ ಪೂಜೆಗಿಟ್ಟ!
ರಾಮಮಂದಿರ ಮತ್ತು ಆರ್ಟಿಕಲ್ 370 ವಿಚಾರದಲ್ಲಿ ಪ್ರಧಾನಿ ಕೈಗೊಂಡ ನಿರ್ಧಾರದಂತೆ ಚೀನಾ ಮತ್ತು ಪಾಕಿಸ್ತಾನದ ಜತೆ ಯಾವಾಗ ಯುದ್ಧ ನಡೆಯಬೇಕೆಂಬುದನ್ನು ಪ್ರಧಾನಿ ಮೋದಿ ಈಗಾಗಲೇ ನಿರ್ಧರಿಸಿದ್ದಾರೆ. ದಿನಾಂಕವೂ ಸಹ ನಿರ್ಧಾರವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ದೇವ್ ಸಿಂಗ್ ಹೇಳಿಕೆಗೆ ಸಂಬಂಧಿಸಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಜಯ್ ಯಾದವ್ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವಾಗಿ ದೇವ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಇದೇ ವೇಳೆ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಕಾರ್ಯಕರ್ತರನ್ನು ಉಗ್ರರಿಗೆ ಹೋಲಿಸಿದರು.
ಇನ್ನು ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀನಾದೊಂದಿಗಿನ ಗಡಿ ಉದ್ವಿಗ್ನತೆಯನ್ನು ಕೊನೆಗೊಳಿಸಲು ಭಾರತ ಬಯಸಿದೆ. ನಮ್ಮ ಒಂದು ಇಂಚು ಭೂಮಿಯನ್ನು ಸಹ ಯಾರೊಬ್ಬರೂ ಕಸಿದುಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದರು. (ಏಜೆನ್ಸೀಸ್)
ಉಡುಪಿ ಯುವತಿ ಅನುಮಾನಾಸ್ಪದ ಸಾವು ಪ್ರಕರಣ: ಕಾಲ್ ರೆಕಾರ್ಡ್ಸ್ನಲ್ಲಿ ಸ್ಫೋಟಕ ಮಾಹಿತಿ..!