More

    ಕರೊನಾದ್ದ ಕೈ ನೋಡಿ ನಮ್ಮ ಭವಿಷ್ಯಾ ಹೇಳಪಾ… ಎನ್ನುತ್ತಿದ್ದಾರೆ ಪ್ರಶಾಂತ ಆಡೂರ

    ಕರೊನಾದ್ದ ಕೈ ನೋಡಿ ನಮ್ಮ ಭವಿಷ್ಯಾ ಹೇಳಪಾ... ಎನ್ನುತ್ತಿದ್ದಾರೆ ಪ್ರಶಾಂತ ಆಡೂರ

    ಕೆಲವೊಬ್ಬರಿಗೆ ದಿವಸಾ ಬೆಳಗ್ಗೆ ಎದ್ದ ಕೂಡ್ಲೆನ ಅವತ್ತಿಂದ ತಮ್ಮ ರಾಶಿ ಫಲಾ, ಭವಿಷ್ಯ ನೋಡೊ ಚಟಾ ಇರ್ತದ. ಅದನ್ನ ನೋಡಿನ ಮುಂದಿನ ಕೆಲಸ. ಹಂಗ ಅದರಾಗ ತಪ್ಪೇನಿಲ್ಲಾ, ‘ಜ್ಯೋತಿಷಮ್ ನೇತ್ರಮುಚ್ಯತೇ’ ಅಂತಾರ. ಸೃಷ್ಟಿಯನ್ನ, ವೇದಗಳನ್ನ ಅರ್ಥ ಮಾಡ್ಕೊಬೇಕಂದರ ಜ್ಯೋತಿಷ್ಯ ಶಾಸ್ತ್ರ ತಿಳ್ಕೊಳೊದ ಅವಶ್ಯ, ಜ್ಯೋತಿಷ್ಯ ಶಾಸ್ತ್ರನ ವೇದಗಳಿಗೆ ಕಣ್ಣ ಇದ್ದಂಗ. ವ್ಯಾಸ ಮುನಿಗಳ ತಂದೆ ಪರಾಶರ ಮುನಿಗಳನ್ನ ‘Father of vedic astrology’ ಅಂತ ಕರಿತಾರ.

    ಹಂಗ ನಾ ಜ್ಯೋತಿಷ್ಯ ನಂಬಂಗಿಲ್ಲಾ ಅಂತೇನಿಲ್ಲಾ ಆದರ ನಾ Anxiety ಮನಷ್ಯಾ. ಹಿಂಗಾಗಿ, ‘ಇಂದು ಸಂಸಾರದಲ್ಲಿ ಕಲಹ, ಆರೋಗ್ಯದ ಕಡೆ ಗಮನ ಇರಲಿ’ ಅಂತ ಓದಿ ಬಿಟ್ಟರ ಮುಗಿತ. ಟೆನ್ಶನ್ ತೊಗೊಂಡ, ಹೆಂಡ್ತಿಗೆ ‘ಟರ್ರ್…ಪರ್ರ್…’ ಅಂದ ಅಕಿ ಕಡೆ ಬೈಸ್ಗೊಂಡ ಅಸಿಡಿಟಿ ಮಾಡ್ಕೊಂಡ 60 ಎಂಎಲ್ ಜೆಲೊಸಿಲ್ ತೊಗೊಂಡರ ಸಮಾಧಾನ. ಅದಕ್ಕ ನಾ ಒಟ್ಟ ರಾಶಿ ಫಲಾ, ಭವಿಷ್ಯ ನೋಡ್ಲಿಕ್ಕೆ ಹೋಗಂಗಿಲ್ಲಾ.

    ಇತ್ತೀಚೆಗೆ ನಮ್ಮ ದೋಸ್ತ ವಿನ್ಯಾ ಈ ಅಸ್ಟ್ರಾಲಾಜಿ, ರಾಶಿಫಲಾ ಹೇಳೋದು ಎಲ್ಲಾ ಕಲತ ಅಗದಿ ಫೇಮಸ್ ಆಗ್ಯಾನ. ದೋಸ್ತರಿಗೆಲ್ಲಾ ರಾಶಿ, ನಕ್ಷತ್ರ ಕೇಳಿ ಅದನ್ನ ಸ್ಟಡಿ ಮಾಡಿ ಸಜೆಶನ್ ಕೊಡ್ತಾನ. ನಂಗೂ ಒಂದ್ಯಾರಡ ಸರತೆ ಹೇಳಿದಾ. ನಾ ಸಿರಿಯಸ್ ಆಗಿ, ‘ದೋಸ್ತ್ ನಾ ಇದನ್ನೇಲ್ಲಾ ನಂಬಗಿಲ್ಲಾ, ನಮ್ಮ ಹಣೇಬರಹದಾಗ ಇದ್ದದ್ದ ಆಗ್ತದ. ’I just enjoy my bloody life’ ಅಂತ ಹೇಳಿ ಬಿಟ್ಟಿದ್ದೆ. ಅಲ್ಲಾ ನಾವ ಲಗ್ನಾ ಮಾಡ್ಕೊಬೇಕಾರರ ಅಂವಾ ಜ್ಯೋತಿಷ್ಯ ಕಲತಿದ್ದರ ಅವಂಗ ಕುಂಡ್ಲಿ ತೋರಿಸಿ ಈಗ ಇದ್ದದ್ದರಕಿಂತಾ ಛಲೋ ಕನ್ಯಾನರ ಮಾಡ್ಕೋತಿದ್ವಿ, ಈಗ ಏನ ಮಾಡೋದ ತೊಗೊಂಡ.

    ಹಂಗ ಅವಂಗ, ‘ನೀ ಇಷ್ಟ ವರ್ಷ ಬಿಟ್ಟ ಈಗ ಯಾಕ ಜ್ಯೋತಿಷ್ಯ ಕಲ್ತಿಲೇ ದೋಸ್ತ್’ ಅಂತ ಕೇಳಿದರ ‘ಲೇ ನನ್ನ ಜಾತಕದಾಗ 36 ಗುಣಾ ಹೆಂಗ ಕೂಡಿ ಬಂದ್ವು ಅಂತ ್ಟrevalulation ಮಾಡ್ಲಿಕ್ಕೆ ಕಲಿಬೇಕಾತಲೆ’ ಅಂದಾ. ಏನ್ಮಾಡ್ತೀರಿ? ಹಂಗ ದೋಸ್ತರ ಯಾರ ಸಮಸ್ಯೆ ಕೇಳಿದರು ಪಾಪ ಒಂದ ಪೈಸಾ ಇಸ್ಗೊಳಲಾರದ ಪರಿಹಾರ ಹೇಳ್ತಾನ ಬಿಡ್ರಿ. ಮೊನ್ನೆ ಯುಗಾದಿಗೆ ತನ್ನ ರೊಕ್ಕದ್ಲೆನ ಪಂಚಾಂಗ ತಂದ ಎಲ್ಲ ರಾಶಿಯವರದು ಭವಿಷ್ಯ ನೋಡಿ ನಮಗೆಲ್ಲ ಮುಂದಿನ ವರ್ಷದ್ದ, ತಿಂಗಳದ್ದ ರಾಶಿಫಲಾ ಹೇಳಲಿಕತ್ತಾ. ನಂದ ಮೇಷ ರಾಶಿ ಅಂತ ನನಗ, ‘ನಿಮಗೆ ವಿದೇಶ ಪ್ರಯಾಣ, ದೇವರಕೃಪೆ ನಿಮ್ಮದಾಗಿರುತ್ತದೆ’ ಅಂತ ಹೇಳಿದಾ.

    ಅಲ್ಲಾ ನಂಗರ ಫ್ಲೈಯಿಂಗ್ ಫೋಬಿಯಾ ಅದ ಅಂತ ಪ್ಲೇನನಾಗ ಸ್ವದೇಶ ಪ್ರಯಾಣನ ಆಗಿಲ್ಲಾ ಇನ್ನ ಎಲ್ಲಿ ವಿದೇಶ ಪ್ರಯಾಣ ಅಂತೇನಿ. ಅಷ್ಟರಾಗ ನಮ್ಮ ಇನ್ನೊಬ್ಬ ‘ಮೇಷ’ ರಾಶಿ ದೋಸ್ತ್ ಮುರಲಿ ಸಿರಿಯಸ್ ಆಗಿ ನಮ್ಮ ವಿನ್ಯಾ ಹೇಳ್ಯಾನ ಅಂದರ ಖರೇ ಆಗೋದ ಗ್ಯಾರಂಟೀ ಅಂತ ಬ್ಯಾಂಕಾಕ್ ಟಿಕೇಟ್ ತಗಿಸಿ ಪೇಪರನಾಗ ವಿದೇಶ ಪ್ರಯಾಣ ಅಂತ 18cm x 24 cm ad ರೆಡಿ ಮಾಡ್ಕೊಳಿಕತ್ತಿದ್ದಾ. ಅಷ್ಟರಾಗ ಕರೊನಾ ಸಂಬಂಧ ಫ್ಲೈಟ್ ಸರ್ವಿಸ್ ಬಂದ ಆತ. ಅಂವಾ ತಲಿಕೆಟ್ಟ ಅವಂಗ ‘ಲೇ ನಿನ್ನ ಭವಿಷ್ಯ ಸುಳ್ಳ ಆತ ಮಗನ, ಪ್ಲೇನ್ ಟಿಕೇಟ್ ರೊಕ್ಕಾ ನೀನ ವಾಪಸ್ ಕೊಡ’ ಅಂತ ಈಗ ಗಂಟ ಬಿದ್ದಾನ. ಹಂಗ ಏಪ್ರಿಲನಾಗ ಯಾವ್ಯಾವ ರಾಶಿ ಒಳಗ ವಿದೇಶ/ಸ್ವದೇಶಿ ಪ್ರಯಾಣ ಅಂತ ಇದ್ವು ಎಲ್ಲಾ ಸುಳ್ಳ ಆದ್ವು.

    ನಂಗಂತೂ ರಾಶಿ ಫಲದಾಗ ಪ್ರವಾಸ ಅಂತ ಬಂದರ ‘ಎಲ್ಲೆ ನನಗ ಆಂಬುಲೆನ್ಸ್ ಒಳಗ ಕರಕೊಂಡ ಹೋಗಿ ಕ್ವಾರಂಟೈನ್ ಮಾಡ್ತಾರೋ’ ಅಂತ ಹೆದರಕಿ ಆಗಲಿಕತ್ತದ. ಇನ್ನೊಬ್ಬ ವೃಷಭ ರಾಶಿ ದೋಸ್ತಗ ‘ಶುಕ್ರನು ಸ್ವಸ್ಥಾನದಲ್ಲಿದ್ದು, ಧನವನ್ನು ಅನುಗ್ರಹಿಸುತ್ತಾನೆ, ಮನಸ್ಸಿಗೆ ನೆಮ್ಮದಿ ಇರುತ್ತದೆ, ನಿಮಗೆ ಈ ತಿಂಗಳು ಶುಭಫಲ’ ಅಂತ ಹೇಳಿದ್ದಾ. ಅಂವಾ ಹೆಂಡ್ತಿನ್ನ ತವರಮನಿಗೆ ಯುಗಾದಿ ಹಬ್ಬಕ್ಕ ಎರಡ ದಿವಸ ಮೊದ್ಲ ಕಳಸಿದ್ದಾ, ಅಕಿ ಅಲ್ಲೆ ಬೆಂಗಳೂರಾಗ ಇಂವಾ ಇಲ್ಲೆ ಹುಬ್ಬಳ್ಳ್ಯಾಗ. ಲಾಕ್​ಡೌನ್ ಅನೌನ್ಸ್ ಆತ. ಅಂವಾ ಇವಂಗ ಫೋನ್ ಮಾಡಿದವನ ‘ಏನ ಕರೆಕ್ಟ್ ಹೇಳಿದಿಲೇ ವಿನ್ಯಾ… ಹೆಂಡ್ತಿನ್ನ ತವರಮನಿಗೆ ಕಳಿಸಿದ್ದೆ, ಲಾಕ್​ಡೌನ್ ಆತ. ಒಂದ ತಿಂಗಳ ಸಂಸಾರದ್ದ ಖರ್ಚ ಉಳಿತ, ಇನ್ನ ಹೆಂಡ್ತಿ ಇಲ್ಲಾಂದರ ಮನಸ್ಸಿಗೆ ನೆಮ್ಮದಿ ಅಂತು ಸೈನ ಸೈ.. ಇನ್ನೇನ ಶುಭ ಫಲಾ ಬೇಕಲೆ’ ಅಂತ ಹೇಳಿದಾ.

    ನಮ್ಮ ಸಿಂಹ ರಾಶಿ ದೋಸ್ತಗ ‘ಗ್ರಹಗಳ ಅನಕೂಲವಿದ್ದರೂ ನಿಮಗೆ ಏಕಾಂತತೆ ಕಾಡುತ್ತದೆ. ಸಿಂಹವು ಗರ್ಜಿಸುತ್ತದೆ. ದುಃಖಿಸುವದಿಲ್ಲಾ’ ಅಂತ ಹೇಳಿದ್ದಾ. ಮುಂದ ಅಂವಾ ಆಫೀಸ್ ಕೆಲಸದ ಮ್ಯಾಲೆ ಪೂಣಾಕ್ಕ ಹೋಗಿ ಸಿಕ್ಕೊಂಡಾ. ಅಂವಾ ತಲಿಕೆಟ್ಟ ‘ಮಗನ ಸಿಂಹವು ಗರ್ಜಿಸುತ್ತದೆ. ದುಃಖಿಸುವದಿಲ್ಲಾ. ಧೈರ್ಯ ತೊಗೊ ಅಂತ ನನಗ ಹೇಳ್ತಿ, ಮ್ಯಾಲೆ ನೀನ ಲಾಕ್​ಡೌನ್ ಆಗಿ ಮನ್ಯಾಗ ಹೆಂಡ್ತಿ ಕೈಯಾಗ ಇಲಿ ಬೋನನಾಗ ಸಿಕ್ಕೊಂಡಂಗ ಸಿಕ್ಕೊಂಡೆನಿ ಅಂತಿ. ನಮಗೇನ ತಲಿ ಭವಿಷ್ಯಾ ಹೇಳ್ತಿಲೇ?’ ಅಂತ ಬೈದಾ. ಆದರೂ ನಮ್ಮ ದೋಸ್ತರಿಗೆ ಅವನ Astrology Knowledge ಮ್ಯಾಲೆ ಭಾರಿ ಅಭಿಮಾನ, ಈ ಮಗಾ ಇಷ್ಟ ತಿಳ್ಕೊಂಡೊಂವಾ ನಮಗ್ಯಾಕ ಈ ಕರೊನಾ, ಲಾಕ್​ಡೌನ್ ಬಗ್ಗೆ ಮೊದ್ಲ ಹೇಳಲಿಲ್ಲಾ, ಅವಂಗರ ಗೊತ್ತ ಇತ್ತಿಲ್ಲೊ ಅಂತ ಕೇಳಿದರ- ‘ದೋಸ್ತ್ ಚಠಠ್ಟಿಟ್ಝಟಜಢ ಒಳಗ ‘ಪಂಚ ಭವತಿ…ಪಂಚ ನಾ ಭವತಿ’ ಅಂದರ ಐದ ಆಗ್ತಾವ ಐದ ಆಗಂಗಿಲ್ಲಾ ಅಂತ ಹೇಳಿದಾ. ‘ಲೇ ಹಂಗಿದ್ದರ ಇನ್ನಮ್ಯಾಲೆ ನೀ ನಮಗ ಖರೆ ಆಗೋ ಐದ ಭವಿಷ್ಯಾ ಇಷ್ಟ ಹೇಳ ಮಗನ’ ಅಂತ ನಾವ ಕಾಡಸಿದ್ವಿ.

    ಇನ್ನ ಕರ್ಕ ರಾಶಿ ದೊಸ್ತಗ ‘ಸಂಸಾರದಲ್ಲಿ ತಾಪತ್ರಯಗಳಿದ್ದರೂ ಗಲಾಟೆಗಳಿಗೆ ಅವಕಾಶ ಕೊಡದಿರಿ. ಮಾಡುವ ಕೆಲಸಗಳಿಗೆ ಭಯ ಬೇಡ. ವೀರತೆಯು ಮಾನವನ ಸವೋತ್ಕೃಷ್ಟ ಗುಣ. ಶನಿ ಅಷ್ಟೋತ್ತರ ಪಠಿಸಿ’ ಅಂತ ಹೇಳಿದಾ. ಅಲ್ಲಾ ತಿಂಗಾಳನ ಗಟ್ಟಲೇ ಮನ್ಯಾಗ ಇದ್ದಾಗ ಸಂಸಾರದಾಗ ತಾಪತ್ರಯ ಆಗೋದ ಸಹಜ. ಇನ್ನ ಹಂತಾದರಾಗ ವೀರತೆಯು ಗಂಡನ ಸವೋತ್ಕೃಷ್ಟ ಗುಣ ಆಗಬೇಕ, ಇಲ್ಲಾಂದರ ನಡೆಯಂಗಿಲ್ಲಾ. ಅಂವಾ ‘ಎಲ್ಲಿ ಶನಿ ಅಷ್ಟೋತ್ತರಲೇ ಮುಂಜಾನಿಯಿಂದ ರಾತ್ರಿ ತನಕ ಹೆಂಡ್ತಿ ಅಷ್ಟೋತ್ತರ ಪಠಣನ ನಡದದ’ ಅಂತ ಅಂದರ, ಇಂವಾ

    ‘ನಾ ಹೇಳಿದ್ದು ಅದ ಮತ್ತ’ ಅನ್ನಬೇಕ?

    ಇನ್ನ ನಮ್ಮ ಪವ್ಯಾನ ಭವಿಷ್ಯದಾಗ ‘ಗೃಹಬಂಧನ. ಆದರೂ ರಾಜಯೋಗದ ಮೇಲೆ ಅಶುಭ ಫಲದ ಕರಿನೆರಳು’ ಅಂತ ಇತ್ತ. ಹಂಗ ಗೃಹಬಂಧನ ಹೋಸಾದೇನಲ್ಲಾ ಆದರ ಅಶುಭ ಫಲದ ಜೊತಿಗೆ ರಾಜಯೋಗನೂ ಅಂತ ಇತ್ತ. ಅಂವಂದ ಕತಿ ಏನಪಾ ಅಂದರ ಅವನೂ ಹಬ್ಬಕ್ಕ ಅತ್ತಿ ಮನಿಯವರ ಕರದಾರ ಅಂತ ಹುಚ್ಚರಂಗ ಹೈದರಾಬಾದನಿಂದ ಹುಬ್ಬಳ್ಳಿಗೆ ‘ಬಿಸಿಬ್ಯಾಳಿ ಭಾತ್, ಶಾವಗಿ ಪಾಯಸ ಮ್ಯಾಲೆ ಒಂದ ಬೆಳ್ಳಿ ಬಟ್ಟಲದ ಆಶಾಕ್ಕ’ ಬಂದ ಅತ್ತಿಮನ್ಯಾಗ ಗೃಹಬಂಧನದಾಗ ಇದ್ದಾನ. ಇನ್ನ ಅತ್ತಿಮನ್ಯಾಗ ಇದ್ದಾನ ಅಂದರ ಅಶುಭ ಫಲಾನ. ಆದರ ಅಳಿಯಾ … ಹಿಂಗಾಗಿ ರಾಜಭೋಗಾನೂ ಅನುಭವಿಸಲಿಕತ್ತಾನ.

    ಮಜಾ ಅಂದರ ಅವನ ಅತ್ತಿ ಭವಿಷ್ಯದಾಗನೂ ಅಶುಭ ಫಲಾ ಅಂತ ಇತ್ತ, ‘ಅದಕ್ಕ ಏನexplanationಲೇ ನಿಂದು’ ಅಂತ ಪವ್ಯಾ ವಿನ್ಯಾಗ ಕೇಳಿದರ ‘ದೋಸ್ತ್ ಲಗ್ನಾ ಮಾಡ್ಕೊಬೇಕಾರ ಬರೇ ಹುಡುಗಾ-ಹುಡುಗಿದ ಇಷ್ಟ ಕುಂಡ್ಲಿ ನೋಡಬಾರದ್ಲೇ. ಅತ್ತಿ-ಸೊಸಿದು, ಅತ್ತಿ-ಅಳಿಯಾಂದನೂ ನೋಡ್ಬೇಕಾಗ್ತದ. ‘ಕನ್ಯಾರಾಶಿಸ್ತಿಥೋ ನಿತ್ಯಂ ಜಾಮಾತಾ ದಶಮಗ್ರಹಃ’ ಅಂತಾರ ಅಂದರ ಒಂಬತ್ತ ಗ್ರಹಗಳು ರಾಶಿ ಟು ರಾಶಿ ಮೂವ ಆಗ್ತಾವ ಆದರ ಈ ಅಳಿಯಾ ಅನ್ನೊ ಹತ್ತನೆ ಗ್ರಹ ಶಾಶ್ವತವಾಗಿ ನಿನ್ನಂಗ ಕನ್ಯಾರಾಶಿಯಲ್ಲೇ ಅಂದರ ಅತ್ತಿಮನ್ಯಾಗ ಇದ್ದರ ಅದ ಅತ್ತಿಗೆ ಅಶುಭ ಫಲಾನ’ ಅಂತ ಅಂದಾ.

    ಅಲ್ಲಾ, ಹಂಗ ಹಿರೇಮನಷ್ಯಾರ ‘ನಿಮ್ಮ ಕೈನಲ್ಲೇ ನಿಮ್ಮ ಭವಿಷ್ಯ ಇದೆ’ ಅಂತಿದ್ದರು. ಕರೊನಾ ಬಂದ ಮ್ಯಾಲೆ ನಂಗ ಅದ ಖರೆ ಅನಸಲಿಕತ್ತದ. ನಾ ಕಡಿಕೆ ಅವಂಗ ‘ದೊಸ್ತ್ ನೀ ನಮ್ಮ ಕುಂಡ್ಲಿ, ಕೈ ನೋಡಿ ಭವಿಷ್ಯ ಹೇಳಿದ್ದ ಸಾಕ. ಒಂದ ಸಲಾ ಆ ಕರೊನಾದ್ದ ಕೈ ನೋಡಿ ನಮ್ಮ ಮುಂದಿನ ಭವಿಷ್ಯ ಏನ ಹೇಳಪಾ, ಅದಕ್ಕ ಯಾವಾಗಿಂದ ಶನಿ ಕಾಟಾ?’ ಅಂತ ಕೇಳಿದರ, ‘ದೊಸ್ತ್ ಏನ ಕಾಳಜಿ ಮಾಡಬ್ಯಾಡ. ಏತದಪಿ ಗಮಿಷ್ಯತಿ, this too shall pass… ಈ ಕರೊನಾ ಹೋಗ್ತದ, ಭಾಳ ಲಗೂ ಹೋಗ್ತದ’ ಅಂತ ಹೇಳ್ಯಾನ.

    ಅಂವಾ ಹೇಳಿದ್ದ ‘ಪಂಚ ಭವತಿ’ ಭವಿಷ್ಯದೊಳಗ ಬರಲಿ ಅಂತ ಆಶಿಸುತ್ತ, ಅಲ್ಲಿ ತನಕ ನಾವು-ನೀವು ಸೋಷಿಯಲ್ ಡಿಸ್ಟೆನ್ಸ್ ಮೆಂಟೇನ್ ಮಾಡೋಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts