ಬೆಳಗಾವಿ: ಪ್ಲಾಸ್ಟಿಕ್ ತ್ಯಾಜ್ಯ ಭೂಮಿಯಲ್ಲಿ ಕೊಳೆಯುವುದಿಲ್ಲ. ಅದನ್ನು ಸುಟ್ಟರೆ ಪರಿಸರಕ್ಕೆ ಹಾನಿ. ಹಾಗಾದರೆ ಪ್ಲಾಸ್ಟಿಕ್ ತ್ಯಾಜ್ಯವೆಂಬ ‘ಭೂತ’ ನಾಶ ಮಾಡುವುದು ಹೇಗೆ? ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಸಕ್ತಿ ತೆಳೆದಿರುವ ಸರ್ಕಾರ, ಪರಿಸರಕ್ಕೆ ಧಕ್ಕೆಯಾಗದಂತೆ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಗೆ ಮುಂದಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಇನ್ನು ಸಿಮೆಂಟ್ ಫ್ಯಾಕ್ಟರಿಗಳ ಇಂಧನವಾಗಿ ಬಳಕೆಯಾಗಲಿದ್ದು, ಸರ್ಕಾರ ಒಪ್ಪಂದ ಮಾಡಿಕೊಂಡಿದೆ.
ಘನತ್ಯಾಜ್ಯ ವಿಲೇವಾರಿ 2016ರ ನಿಯಮದನ್ವಯ ರಾಷ್ಟ್ರೀಯ ಹಸಿರು ನ್ಯಾಯಾಧಿ ಕರಣ 2019ರ ಸೆಪ್ಟೆಂಬರ್ನಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳಿಗೆ, ಸಿಮೆಂಟ್ ಫ್ಯಾಕ್ಟರಿ ಹಾಗೂ ಇತರ ಫ್ಯಾಕ್ಟರಿಗಳ ಜತೆ ಒಪ್ಪಂದ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿತ್ತು. ಅಲ್ಲದೆ, ಸಿಮೆಂಟ್ ಫ್ಯಾಕ್ಟರಿಗಳೂ ಪಾಲಿಕೆಯಿಂದ ಕಡ್ಡಾಯವಾಗಿ ಪ್ಲಾಸ್ಟಿಕ್ ತ್ಯಾಜ್ಯ ಪಡೆಯುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಈಗ ಸಿಮೆಂಟ್ ಫ್ಯಾಕ್ಟರಿ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.
30 ಟನ್ ತ್ಯಾಜ್ಯ ಪೂರೈಕೆ: ಬೆಳಗಾವಿ ಮಹಾನಗರಪಾಲಿಕೆ ಅಧಿಕಾರಿಗಳು ಜೆ.ಕೆ. ಸಿಮೆಂಟ್ ಜತೆ ಒಡಂಬಡಿಕೆ ಮಾಡಿಕೊಂಡಿ ದ್ದಾರೆ. ಈಗಾಗಲೇ ಪ್ರಾಯೋಗಿಕವಾಗಿ 30 ಟನ್ ಪ್ಲಾಸ್ಟಿಕ್ ತ್ಯಾಜ್ಯ ಪೂರೈಸಲಾಗಿದೆ. ಈ ಯೋಜನೆಯಿಂದ ಪರಿಸರಮಾಲಿನ್ಯ ತಡೆಗಟ್ಟಬಹುದು. ಜತೆಗೆ ಪ್ಪಾಸ್ಟಿಕ್ ವಿಲೇವಾರಿಯ ತಲೆನೋವೂ ಕಡಿಮೆಯಾಗಲಿದೆ. ಸಿಮೆಂಟ್ ಫ್ಯಾಕ್ಟರಿಗಳಿಗೂ ಪ್ಲಾಸ್ಟಿಕ್ ತ್ಯಾಜ್ಯ ಪರ್ಯಾಯ ಇಂಧನವಾಗಲಿದೆ.
ಕಸ ವಿಲೇವಾರಿ ಪ್ರಕ್ರಿಯೆ ಹೀಗೆ ನಡೆಯುತ್ತೆ…
ಮಹಾನಗರ ಪಾಲಿಕೆಗಳು 30 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿಟ್ಟುಕೊಳ್ಳಬೇಕು. ಫ್ಯಾಕ್ಟರಿಗಳ ಸಿಬ್ಬಂದಿಯೇ ಪಾಲಿಕೆ ಕಸ ಸಂಗ್ರಹಿಸಿಡುವ ಸ್ಥಳಕ್ಕೆ ಬಂದು ಸ್ವಂತ ಖರ್ಚಿನಲ್ಲಿ ಅದನ್ನು ಒಯ್ಯುತ್ತಾರೆ. ಇದರಲ್ಲಿ ಪಾಲಿಕೆ ಯಾವುದೇ ವ್ಯವಹಾರವಾಗಲಿ, ಆದಾಯದ ಅಪೇಕ್ಷೆಯನ್ನಾಗಲೀ ಇಟ್ಟುಕೊಳ್ಳುವಂತಿಲ್ಲ. ಸಿಮೆಂಟ್ ಫ್ಯಾಕ್ಟರಿಗಳು ಪ್ಲಾಸ್ಟಿಕ್ ತ್ಯಾಜ್ಯವನ್ನು ಇಂಧನವನ್ನಾಗಿ ಮಾರ್ಪಡಿಸಿಕೊಳ್ಳಲು ಪ್ರತ್ಯೇಕ ಘಟಕ ನಿರ್ವಿುಸಿಕೊಳ್ಳುತ್ತಿವೆ. ಪರಿಸರಕ್ಕೆ ಹಾನಿಯಾಗದಂತೆ ಪ್ಲಾಸ್ಟಿಕ್ ಮರುಬಳಕೆ ಪ್ರಕ್ರಿಯೆ ನಡೆಯಲಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹಾಗೂ ಸರ್ಕಾರದ ಆದೇಶದಂತೆ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಮಾಡಲು ಬೆಳಗಾವಿ ಮಹಾನಗರ ಪಾಲಿಕೆಯು ಸಿಮೆಂಟ್ ಫ್ಯಾಕ್ಟರಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಪ್ಲಾಸ್ಟಿಕ್ ತ್ಯಾಜ್ಯ ಇನ್ನು ಫ್ಯಾಕ್ಟರಿಗಳಲ್ಲಿ ಇಂಧನವಾಗಿ ಮರುಬಳಕೆಯಾಗಲಿದೆ. ಇದರಿಂದ ನಗರ-ಪಟ್ಟಣಗಳಲ್ಲಿ ತೊಡಕಾಗಿದ್ದ ಪ್ಲಾಸ್ಟಿಕ್ ಕಸ ವಿಲೇವಾರಿ ಸಮಸ್ಯೆಗೂ ಪರಿಹಾರ ಸಿಕ್ಕಂತಾಗುತ್ತದೆ.
| ಕೆ.ಎಚ್. ಜಗದೀಶ ಆಯುಕ್ತ ಮಹಾನಗರ ಪಾಲಿಕೆ, ಬೆಳಗಾವಿ