ಚಿತ್ರದುರ್ಗ: ಮಳೆಗಾಲದಲ್ಲಿ ರೈತರಿಂದ ಬರುವ ಸಸಿಗಳ ಬೇಡಿಕೆ ಪೂರೈಸಲು ಅರಣ್ಯ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸಿದ್ಧತೆ ನಡೆಸಿವೆ.ಈ ಸಂಬಂಧ ಜಿಲ್ಲೆಯ 16 ನರ್ಸರಿಗಳಲ್ಲಿ 12.55 ಲಕ್ಷಕ್ಕೂ ಅಧಿಕ ಸಸಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಪ್ರಾದೇಶಿಕ ವ್ಯಾಪ್ತಿಯ 7 ನರ್ಸರಿಗಳಿಂದ 7.55 ಲಕ್ಷ, ಸಾಮಾಜಿಕ ವಿಭಾಗದ 9 ನರ್ಸರಿಗಳಿಂದ 5 ಲಕ್ಷಕ್ಕೂ ಅಧಿಕ ಸಸಿಗಳನ್ನು ವಿತರಿಸಲು ಇಲಾಖೆ ಯೋಜಿಸಿದೆ.
ಸಾಮಾಜಿಕ ವಿಭಾಗದಡಿ ಮಾತ್ರ ನರೇಗಾದಡಿ ಸಣ್ಣ, ಅತೀ ಸಣ್ಣ, ಪರಿಶಿಷ್ಟ ಜಾತಿ, ವರ್ಗ, ಬಿಪಿಎಲ್ ರೈತರಿಗೆ ಹಾಗೂ ಗ್ರಾಪಂ ಪಿಡಿಒಗಳ ಶಿಫಾರಸು ಆಧರಿಸಿ ಸರ್ಕಾರಿ ಜಾಗದಲ್ಲಿ ನೆಡಲು ಸಂಘ-ಸಂಸ್ಥೆಗಳಿಗೆ ಉಚಿತವಾಗಿ ಸಸಿ ವಿತರಿಸಲಾಗುತ್ತದೆ.
ಸಾರ್ವಜನಿಕ ವಿತರಣೆಗೆ ಅಭಿವೃದ್ಧಿ ಪಡಿಸಿದ ಸಸಿಗಳ ಮಾರಾಟ ದರವನ್ನು ಈ ವರ್ಷ ಹೆಚ್ಚಿಸಲಾಗಿದೆ. ಕಳೆದ 15-20 ವರ್ಷಗಳಿಂದ ದರ ಏರಿಸಿರಲಿಲ್ಲ. ಸಸಿ ಬೆಳೆಸಲು ತಗುಲುವ ವೆಚ್ಚದಲ್ಲಿ ಶೇ.50ರಷ್ಟು ಮೊತ್ತವಾದರೂ ಬರಲೆಂಬುದು ಇದರ ಹಿಂದಿನ ಉದ್ದೇಶ. ಸಸಿ ಅಳತೆ ಆಧರಿಸಿ ದರ ನಿಗದಿ ಪಡಿಸಲಾಗಿದೆ ಎನ್ನುತ್ತದೆ ಅರಣ್ಯ ಇಲಾಖೆ.
ಏತನ್ಮಧ್ಯೆ ದರ ಏರಿಕೆಯಿಂದ ಸಸಿಗಳನ್ನು ಕೊಂಡೊಯ್ಯಲು ರೈತರು ಹಿಂಡಿ ಇಡುತ್ತಿರುವುದು ಇಲಾಖೆ ಗಮನಕ್ಕೆ ಬಂದಿದೆ. ಸಸಿಗಳು ನರ್ಸರಿಗಳಲ್ಲೇ ಉಳಿವ ಅಪಾಯವಿದೆ ಎಂಬ ಆತಂಕದಿಂದ ಹಳೇ ದರದಲ್ಲೇ ಮಾರಾಟಕ್ಕೆ ಅನುಮತಿ ಕೋರಿ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ಪ್ರಾದೇಶಿಕ ಅರಣ್ಯ ವಿಭಾಗದಲ್ಲಿ ಕೃಷಿ ಪ್ರೋತ್ಸಾಹ ಯೋಜನೆಯಡಿ ಸಸಿ ಖರೀದಿಸಿ, 3 ವರ್ಷ ಪೋಷಿಸುವ ರೈತರಿಗೆ ಪ್ರೋತ್ಸಾಹಧನ ಕೊಡಲಾಗುತ್ತಿದೆ.
ಯಾವೆಲ್ಲ ಸಸಿಗಳು ಲಭ್ಯ?
ನರ್ಸರಿಗಳಲ್ಲಿ 25ಕ್ಕೂ ಹೆಚ್ಚು ತಳಿಗಳನ್ನು ಬೆಳೆಸಲಾಗಿದೆ. ತೇಗ, ಹೊಂಗೆ, ನೆಲ್ಲಿ, ನುಗ್ಗೆ, ಹುಣಸೆ, ಸಿಹಿಹುಣಸೆ, ಆಲ, ಅರಳಿ, ಗುಲ್ ಮೊಹರ್, ಕಾಡು ಬಾದಾಮಿ, ಬಸರಿ, ಸಿಲ್ವರ್ ಓಕ್, ಮಹಾಗನಿ, ಸೀಬೆ, ಕಾಡು ದಾಳಿಂಬೆ, ರಕ್ತ ಚಂದನ, ಶ್ರೀಗಂಧ, ಕರಿಬೇವು, ನೇರಳೆ, ರೇನ್ ಟ್ರೀ, ಜವನಿಕ, ನಿಂಬೆ, ಹೊನ್ನೆ, ಬೀಟೆ, ಹಲಸು, ಹೆಬ್ಬೇವು, ಬಿದಿರು, ಗೊಡಂಬಿ, ಅತ್ತಿ, ಸೀತಾಫಲ, ಚರ್ರಿ, ತಾರೆ, ತಪಸಿ, ಕಮರು, ಬೇವು, ಬೇಲ, ಬಿಲ್ವಪತ್ರೆ, ಇತ್ಯಾದಿ ಸಸಿಗಳು ಲಭ್ಯವಿವೆ.
ನರ್ಸರಿಗಳು-ಸಸಿಗಳ ವಿವರ (ಲಕ್ಷ)-(ರೆಗ್ಯೂಲರ್)
ಚಂದ್ರವಳ್ಳಿ-1.45
ತೊಡರನಾಳ್-1.22
ಎಂಡಿ ಮಹದೇವ-1.22
ಶ್ರೀರಂಗ, ಗೌಡನಹಳ್ಳಿ 1.22
ವಜ್ರ-1.22
ಚಳ್ಳಕೆರೆ-1.22
ಸಾಮಾಜಿಕ ಅರಣ್ಯ ನರ್ಸರಿಗಳು:
ಐನಹಳ್ಳಿ, ಎಚ್.ಡಿ.ಪುರ ಕಣಿವೆ, ಕುಂಬಾರಗಟ್ಟಿ, ವಜ್ರ, ಮೇಟಿಕುರ್ಕೆ, ಕೆ.ಆರ್.ಹಳ್ಳಿ, ಚಳ್ಳಕೆರೆ, ಬಿ.ಜಿ.ಕೆರೆ ಅರುಂಧತಿ, ಒಬ್ಯಯ್ಯ ಹಟ್ಟಿ.
ಸಸಿಗಳ ದರ ಏರಿಕೆಗೆ ರೈತ ವರ್ಗದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಈ ವರ್ಷದ ಮಟ್ಟಿಗಾದರೂ ಹಳೆಯ ದರದಲ್ಲಿ ಸಸಿಗಳ ಮಾರಾಟಕ್ಕೆ ಅನುಮತಿ ಕೋರಿ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದೇವೆ.
ಸುರೇಶ್ಬಾಬು, ಡಿಸಿಎಫ್, ಸಾಮಾಜಿಕ ಅರಣ್ಯ, ಚಿತ್ರದುರ್ಗ
ರೈತರು, ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಲು ಇಲಾಖೆ ಸಜ್ಜಾಗಿದೆ. ನರ್ಸರಿಗಳಲ್ಲಿ ವಿವಿಧ ತಳಿಗಳ ಸಸಿಗಳನ್ನು ಬೆಳೆಸಲಾಗಿದೆ. ದರ ಏರಿಕೆ ಆಗಿದೆ. ನಾಗರಿಕರು ಸಸಿಗಳನ್ನು ಬೆಳೆಸಲು ಕಾಳಜಿ ವಹಿಸಬೇಕು.
ಟಿ.ರಾಜಣ್ಣ, ಡಿಸಿಎಫ್, ಅರಣ್ಯ ಇಲಾಖೆ, ಚಿತ್ರದುರ್ಗ
ಮಗ್ಶಾಟ್ (ಟಿ.ರಾಜಣ್ಣ)