ವೇಣುವಿನೋದ್ ಕೆ.ಎಸ್. ಮಂಗಳೂರು
ಎರಡು ವರ್ಷಗಳ ಹಿಂದೆ ಪ್ರಾಧಿಕಾರ ಎಂದು ಘೋಷಿಸಲ್ಪಟ್ಟಿದ್ದ ಮಂಗಳೂರಿನ ಜನಪ್ರಿಯ ಪ್ರವಾಸಿ ತಾಣ ಪಿಲಿಕುಳ ನಿಸರ್ಗಧಾಮ ಕೊನೆಗೂ ಹೊಸ ಪದವಿಗೇರಲು ತಯಾರಾಗಿದೆ.
2021ರ ಜನವರಿಯಿಂದಲೇ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುವುದಕ್ಕೆ ಬೇಕಾದ ಸಿದ್ಧತೆ ನಡೆದಿವೆ. 2021ರ ಏಪ್ರಿಲ್ 1ರಿಂದ ಹೊಸ ಆರ್ಥಿಕ ವರ್ಷ ಶುರುವಾಗುವಾಗ ಪೂರ್ಣ ಪ್ರಮಾಣದ ಪ್ರಾಧಿಕಾರವಾಗಿ ಪಿಲಿಕುಳ ಕೆಲಸ ಮಾಡಲಿದೆ.
2018ರ ಫೆಬ್ರವರಿಯಲ್ಲೇ ಪಿಲಿಕುಳವನ್ನು ಪ್ರಾಧಿಕಾರ ಎಂದು ಘೋಷಣೆ ಮಾಡಲಾಗಿತ್ತು. ಪ್ರಸ್ತುತ ಸೊಸೈಟಿ ಆಗಿ ಮುಂದುವರಿದಿರುವ ಪಿಲಿಕುಳಕ್ಕೆ ಪ್ರವಾಸೋದ್ಯಮ ದಿಶೆಯಲ್ಲಿ ಸಾಕಷ್ಟು ಅವಕಾಶಗಳಿದ್ದರೂ ಪ್ರಾಧಿಕಾರವಾಗದ ಕಾರಣ ಕಟ್ಟಿ ಹಾಕಿದ ಸ್ಥಿತಿ ಇದೆ.
1996ರಲ್ಲಿ ಶುರುವಾದ ಯೋಜನೆ ಪಿಲಿಕುಳ ನಿಸರ್ಗಧಾಮ. ಪ್ರಸ್ತುತ ಸುಮಾರು 370 ಎಕರೆಯಲ್ಲಿ ಅತ್ಯಾಧುನಿಕ 3ಡಿ ಪ್ಲಾನೆಟೋರಿಯಂ, ಪ್ರಾದೇಶಿಕ ವಿಜ್ಞಾನ ಕೇಂದ್ರ, ವಾಟರ್ ಪಾರ್ಕ್, ದೋಣಿ ವಿಹಾರ, ಕುಶಲಕರ್ಮಿಗಳ ಪಾರ್ಕ್, ಗುತ್ತಿನಮನೆ, ಗಾಲ್ಫ್ ಕೋರ್ಸ್, ವನ್ಯಜೀವಿಧಾಮ, ಅರ್ಬನ್ ಹಾತ್ಗಳನ್ನು ಒಳಗೊಂಡಿದೆ. ಮಂಗಳೂರು ನಗರದ ಹೊರವಲಯದಲ್ಲಿ ಪ್ರಶಾಂತತೆ ಅರಸಿ ಬರುವ ಹಾಗೂ ಎಲ್ಲ ವರ್ಗದ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಜಾಗವಿದು.
ಆರ್ಥಿಕ ಮುಗ್ಗಟ್ಟು: ಪಿಲಿಕುಳ ನಿಸರ್ಗಧಾಮದ ಸೊಸೈಟಿಗೆ ಆರ್ಥಿಕ ಮುಗ್ಗಟ್ಟು ಪರಿಹಾರ ಕಾಣದ ಸಮಸ್ಯೆ. ಇತ್ತೀಚೆಗೆ ಕರೊನಾ ಕಾರಣದಿಂದ ಗೇಟ್ ಕಲೆಕ್ಷನ್ ಸಾರ್ವಕಾಲಿಕ ಕುಸಿತ ಕಂಡಿದ್ದು, ಸಿಬ್ಬಂದಿಗೆ ವೇತನ ಕೊಡುವ ಸವಾಲು ಎದುರಾಗಿದೆ. ವನ್ಯಜೀವಿಧಾಮಕ್ಕೆ ಎಂಆರ್ಪಿಎಲ್ ಕಂಪನಿ ಸಹಾಯಹಸ್ತ ಚಾಚಿರುವುದು ತುಸು ನಿಟ್ಟುಸಿರು ತಂದಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾಧಿಕಾರ ರಚನೆ ಆದರೆ ಸರ್ಕಾರದ ಮಟ್ಟದಲ್ಲಿ ಪಿಲಿಕುಳಕ್ಕೆ ಹೆಚ್ಚಿನ ಆದ್ಯತೆ ಸಿಗಲಿದೆ. ಬಜೆಟ್ ಅನುದಾನ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.
ಪ್ರಸ್ತುತ ಇಲ್ಲಿ ಎರಡು ಸೊಸೈಟಿಗಳಿವೆ. ಪಿಲಿಕುಳ ನಿಸರ್ಗಧಾಮ ಸೊಸೈಟಿ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿ. ಪಿಲಿಕುಳ ಸೊಸೈಟಿಯ ಕಾರ್ಯಕಾರಿ ನಿರ್ದೇಶಕರೇ ವಿಜ್ಞಾನ ಕೇಂದ್ರಕ್ಕೂ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಯೋಜನೆಗಳು ಬರುತ್ತಿಲ್ಲ: ಪಿಲಿಕುಳ ನಿಸರ್ಗಧಾಮಕ್ಕೆ ಹಿಂದಿನ ಜಿಲ್ಲಾಧಿಕಾರಿ ಭರತ್ಲಾಲ್ ಮೀನಾ ಹಾಗೂ ಆಗಿನ ಕೆಎಎಸ್ ಅಧಿಕಾರಿಯಾಗಿದ್ದ ಜೆ.ಆರ್.ಲೋಬೊ ಸಾಕಷ್ಟು ಉತ್ಸಾಹದಿಂದ ಕೆಲಸ ಮಾಡಿದ್ದರು. ಅದರಿಂದಾಗಿ ಪಿಲಿಕುಳ ಜನಪ್ರಿಯಗೊಂಡಿತ್ತು. ಹಲವು ಯೋಜನೆಗಳೂ ಬರುತ್ತಿದ್ದವು. ಅರ್ಬನ್ ಹಾತ್ನಂತಹ ಯೋಜನೆಗಳಿಂದ ಶೇ.15ರಷ್ಟು ಸೂಪರ್ವಿಷನ್ ಶುಲ್ಕ ಸೊಸೈಟಿಗೂ ಸಲ್ಲುತ್ತದೆ. ಇದರಿಂದ ಖರ್ಚು ಸುಗಮವಾಗಿ ಸಾಗುತ್ತದೆ. ಈಗೀಗ ಅಂತಹ ಪ್ರಾಜೆಕ್ಟ್ಗಳು ಬರುತ್ತಿಲ್ಲ. ವಿಜ್ಞಾನ ಕೇಂದ್ರದ ಕೆಲ ಸಿಬ್ಬಂದಿಗೆ ಮಾತ್ರವೇ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಸಂಬಳ ಸಿಗುತ್ತದೆ. ಈ ಭಾಗ್ಯ ಸೊಸೈಟಿಯ ಇತರ ಸಿಬ್ಬಂದಿಗೆ ಇಲ್ಲ. ಏನಿದ್ದರೂ ಗೇಟ್ ಕಲೆಕ್ಷನ್ನಿಂದಲೇ ಸರಿದೂಗಿಸಿಕೊಂಡು ಹೋಗಬೇಕು.
ಜನವರಿಯಿಂದಲೇ ಪ್ರಾಧಿಕಾರ
ಪ್ರಸ್ತುತ ಜಿಲ್ಲಾಧಿಕಾರಿ ಪಿಲಿಕುಳವನ್ನು ಪ್ರಾಧಿಕಾರವಾಗಿಸುವ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಅದಕ್ಕಾಗಿ ಆಯುಕ್ತರ ನೇಮಕ, ಸಿಬ್ಬಂದಿ ಸೂತ್ರ ರಚನೆ, ಬಜೆಟಿಂಗ್ ಇತ್ಯಾದಿ ಸಿದ್ಧಪಡಿಸಬೇಕಾಗಿದೆ. ಮೂವರು ನಾಮನಿರ್ದೇಶಿತ ಸದಸ್ಯರಾಗಬೇಕು. ಅಧ್ಯಕ್ಷರಾಗಿ ಜಿಲ್ಲಾಧಿಕಾರಿ ಇರುತ್ತಾರೆ. ಜನವರಿಯಲ್ಲೇ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವಾಗಿ ಕೆಲಸ ಮಾಡಲಿದೆ. ಜಿಲ್ಲಾಧಿಕಾರಿಯವರೇ ಅಧ್ಯಕ್ಷರಾಗಿದ್ದು ಕಾರ್ಯನಿರ್ವಾಹಕ ನಿರ್ದೇಶಕರನ್ನೇ ಆಯುಕ್ತರಾಗಿ ಪರಿವರ್ತಿಸಲಾಗುತ್ತದೆ.
ಬಜೆಟ್ನಲ್ಲಿ ಘೋಷಣೆಯಾಗಿದ್ದರೂ ಹಣಕಾಸು ಇಟ್ಟಿರಲಿಲ್ಲ. ಹಾಗಾಗಿ ಈವರೆಗೆ ಪ್ರಾಧಿಕಾರ ಇರಲಿಲ್ಲ. ಜನವರಿಯಲ್ಲೇ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬರಲಿದೆ. ಪ್ರಾಧಿಕಾರ ವ್ಯಾಪ್ತಿಯ ಅಭಿವೃದ್ಧಿ ಕೆಲಸಗಳಿಗಾಗಿ 5 ಕೋಟಿ ರೂ. ಪ್ರಸ್ತಾವನೆ ಕೂಡ ಸಲ್ಲಿಸಲಾಗುವುದು.
– ಡಾ.ರಾಜೇಂದ್ರ ಕೆ.ವಿ, ದ.ಕ. ಜಿಲ್ಲಾಧಿಕಾರಿ