ಬೆಂಗಳೂರು: ಹೆಬ್ಬಾಳದ ಕೆಂಪಾಪುರದಲ್ಲಿ ನಾಲ್ಕಂತಸ್ತಿನ ಕಟ್ಟಡವೊಂದು ವಾಲಿದ್ದು, ಬಿಬಿಎಂಪಿ ಜಂಟಿ ಆಯುಕ್ತ ಅಶೋಕ ಹಾಗೂ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೊಂದು ಪಿಜಿ ಕಟ್ಟಡವಾಗಿದ್ದು ಇಂದು ಬೆಳಗ್ಗೆ 8.30ರ ವೇಳೆಗೆ ವಾಲಿಕೊಂಡಿದೆ. ಅಲ್ಲಿನ ಜನರ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಈ ಕಟ್ಟಡದ ಹಿಂಭಾಗದಲ್ಲಿ ಮನೆ ಕಟ್ಟಲು ಎಂಟು ಅಡಿ ಆಳದ ಹಳ್ಳ ತೆಗೆದಿರುವುದೇ ಕಟ್ಟಡ ವಾಲಲು ಕಾರಣ ಎನ್ನಲಾಗಿದೆ. ವಾಲಿರುವ ಕಟ್ಟಡದ ಹಾಗೂ ಪಕ್ಕದ ಮನೆಯಲ್ಲಿರುವ ಗ್ಯಾಸ್ ಸಿಲೆಂಡರ್ ಕನೆಕ್ಷನ್ ತೆಗೆಯಲು ಸೂಚನೆ ನೀಡಲಾಗಿದೆ. ಹಾಗೇ ಸ್ಥಳದಲ್ಲಿ ಆಂಬುಲೆನ್ಸ್, ವೈದ್ಯರು ಇರಬೇಕು ಎಂದು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಲಾಗಿದೆ.