ಶಿವಮೊಗ್ಗ: ದೇಶಾದ್ಯಂತ ಪಿಎಫ್ಐ ನಿಷೇಧದ ಬೆನ್ನಲ್ಲೇ ಬುಧವಾರ ರಾತ್ರಿ ಶಿವಮೊಗ್ಗ ನಗರದ ಐದು ನಿಷೇಧಿತ ಪಿಎಫ್ಐ ಕಾರ್ಯಕರ್ತರ ಮನೆಗಳು ಮತ್ತು ಎಸ್ಡಿಪಿಐ ಕಚೇರಿ ಮೇಲೆ ಪೊಲೀಸರು ದಾಳಿ ಮಾಡಿ ಶೋಧ ನಡೆಸಿದರು.
ಪಿಎಫ್ಐ ಸಂಘಟನೆ ಜಿಲ್ಲಾಧ್ಯಕ್ಷ ಉದುಲ್ಲಾ ಷರೀಫ್, ಮಾಜಿ ಅಧ್ಯಕ್ಷ ರಿಜ್ವಾನ್, ಸದಸ್ಯ ಫಾರೂಖ್, ಎಸ್ಡಿಪಿಐ ಸಂಘಟನೆ ಮಾಜಿ ಜಿಲ್ಲಾಧ್ಯಕ್ಷ ಸಲೀಂ ಖಾನ್, ಗೋಪಾಳ ಪ್ರೆಸ್ ಕಾಲನಿಯ ಒಬೆದುಲ್ಲಾ ಅವರ ಮನೆಗಳ ಮೇಲೆ ಪ್ರತ್ಯೇಕವಾಗಿ ಐದು ತಂಡಗಳಲ್ಲಿ ದಾಳಿ ನಡೆಸಿದರು.
ಪಿಎಫ್ಐ ಸಂಘಟನೆಯ ಬಹುತೇಕ ಮುಖಂಡರು ಪರಾರಿಯಾಗಿದ್ದು ಮನೆಗಳಿಗೆ ಬೀಗ ಹಾಕಲಾಗಿತ್ತು. ಹಾಗಾಗಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರ ಅನುಮತಿ ಪಡೆದು ಮನೆಗಳ ಬೀಗ ಒಡೆದು ಪೊಲೀಸರು ಪರಿಶೀಲನೆ ನಡೆಸಿದರು. ಮತ್ತೊಂದೆಡೆ ಶಿವಮೊಗ್ಗದ ಬೈಪಾಸ್ ರಸ್ತೆಯ ಎಸ್ಡಿಪಿಐ ಸಂಘಟನೆಯ ಕಚೇರಿ ಮೇಲೂ ದಾಳಿ ನಡೆಸಿ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಿದ ಪೊಲೀಸರು, ತಹಸೀಲ್ದಾರ್ ಡಾ. ಎನ್.ಜೆ.ನಾಗರಾಜ್ ನೇತೃತ್ವದಲ್ಲಿ ಕಚೇರಿಗೆ ಬೀಗ ಜಡಿದರು.
ಶಿವಮೊಗ್ಗ ಪೊಲೀಸರು ಐದು ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ದಾಳಿ ನಡೆಸಿದ್ದಾರೆ. ದೊಡ್ಡಪೇಟೆ ಠಾಣೆ ಇನ್ಸ್ಪೆಕ್ಟರ್ ಅಂಜನ್ಕುಮಾರ್, ಕೋಟೆ ಠಾಣೆ ಇನ್ಸ್ಪೆಕ್ಟರ್ ಕೆ.ಟಿ.ಚಂದ್ರಶೇಖರ್, ವಿನೋಬನಗರ ಠಾಣೆ ಇನ್ಸ್ಪೆಕ್ಟರ್ ರವಿ, ಶಿವಮೊಗ್ಗ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಅಭಯ್ಪ್ರಕಾಶ್ ಸೋಮನಾಳ, ಕುಂಸಿ ಠಾಣೆ ಇನ್ಸ್ಪೆಕ್ಟರ್ ಹರೀಶ್ ಪಟೇಲ್ ನೇತೃತ್ವದಲ್ಲಿ ಪೊಲೀಸರ ತಂಡಗಳು ದಾಳಿ ನಡೆಸಿವೆ. ಪೊಲೀಸರ ದಾಳಿ ವೇಳೆ ಕಂದಾಯ ಇಲಾಖೆ, ಸ್ಮಾರ್ಟ್ಸಿಟಿ, ಸೂಡಾ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು.