ನವದೆಹಲಿ: ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ರೈತಹೋರಾಟದ ಹೆಸರಿನಲ್ಲಿ ನಡೆದ ಹಿಂಸಾಚಾರದ ವೇಳೆ ತಾನು ಚಲಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ ಹೊಡೆದು ಸಾವನ್ನಪ್ಪಿದ ಯುವ ರೈತ ಪ್ರತಿಭಟನಾಕಾರನ ಸಾವಿನ ಬಗ್ಗೆ ವಿಶೇಷ ತನಿಖೆ ಕೋರಿ ಆತನ ಸಂಬಂಧಿಕರು ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಹರಿಯಾಣದ ರಾಮಪುರದ ನಿವಾಸಿಯಾಗಿದ್ದ ಮೃತ ನವರೀತ್ ಸಿಂಗ್ನ ತಾತ ಹರ್ದೀಪ್ ಸಿಂಗ್ ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
ದೆಹಲಿಯ ಐಟಿಓ ಪ್ರದೇಶದಲ್ಲಿ ನವರೀತ್ ಸಿಂಗ್ ಚಾಲಿಸುತ್ತಿದ್ದ ಟ್ರ್ಯಾಕ್ಟರ್ ಬ್ಯಾರಿಕೇಡ್ಗಳಿಗೆ ಗುದ್ದಿದಾಗ ಪಲ್ಟಿ ಹೊಡೆಯಿತು. ಆ ಟ್ರ್ಯಾಕ್ಟರ್ನ ಕೆಳಗೆ ಸಿಕ್ಕಿ ಆತ ತೀವ್ರವಾಗಿ ಗಾಯಗೊಂಡು ಸಾವಪ್ಪಿದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಮೃತ ನವರೀತ್ ಸಿಂಗ್ಗೆ ಪೊಲೀಸರು ಗುಂಡು ಹಾರಿಸಿದ್ದರು. ಅದರಿಂದಾಗಿ ನಿಯಂತ್ರಣ ತಪ್ಪಿ ಅವನ ಟ್ರ್ಯಾಕ್ಟರ್ ಬ್ಯಾರಿಕೇಡ್ಗೆ ಢಿಕ್ಕಿ ಹೊಡೆದು ಪಲ್ಟಿ ಹೊಡೆಯಿತು ಎಂದು ಪ್ರತ್ಯಕ್ಷ ಸಾಕ್ಷಿಗಳು ಹೇಳಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ: ಕೆಂಪು ಕೋಟೆ ಹಿಂಸಾಚಾರದ ಪ್ರಮುಖ ಆರೋಪಿ ದೀಪ್ ಸಿಧು ಬಂಧನ
ಟ್ರ್ಯಾಕ್ಟರ್ ಕೆಳಗೆ ಸಿಕ್ಕಿ ತೀವ್ರವಾಗಿ ಗಾಯಗೊಂಡಿದ್ದ ನವರೀತ್ ಸಿಂಗ್ಗೆ ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸಲು ಪೊಲೀಸರು ಕ್ರಮಕೈಗೊಂಡಿಲ್ಲ. ಅವನ ಸಾವಿನ ಕಾರಣ ತಿಳಿಯಲು ಸೂಕ್ತ ತನಿಖೆ ನಡೆಸಿಲ್ಲ. ರಾಮಪುರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಸಲಾದ ಮರಣೋತ್ತರ ಪರೀಕ್ಷೆಯ ವರದಿಗಳನ್ನು ಕೂಡ ಕುಟುಂಬದವರಿಗೆ ಒದಗಿಸಿಲ್ಲ ಎಂದು ದೂರಿರುವ ಅರ್ಜಿದಾರರು, ದೆಹಲಿ ಪೊಲೀಸರು ಸಾವಿನ ನಿಜವಾದ ಕಾರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೋರ್ಟ್ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ಈ ಘಟನೆಯ ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಈ ಅರ್ಜಿಯು ಗುರುವಾರ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದೆ ಎನ್ನಲಾಗಿದೆ.(ಏಜೆನ್ಸೀಸ್)
ಆ ‘ಮಹಿಳೆಯರು’ ಹೆದ್ದಾರಿಯಲ್ಲಿ ಲಿಫ್ಟ್ ಕೇಳಿದರು; ಆಮೇಲೆ ಆಗಿದ್ದೇ ಬೇರೆ…
ಚೀನಾದಲ್ಲಿ ಸಿಕ್ಕಿಹಾಕಿಕೊಂಡಿದ್ದ 18 ಭಾರತೀಯರು ಶೀಘ್ರವೇ ಮರಳಲಿದ್ದಾರೆ…