ಇಂಡಿ: ಚಿಣ್ಣರ ಪದವಿ ಪ್ರದಾನ ಕಾರ್ಯಕ್ರಮದಂಥ ಸನ್ನಿವೇಶಗಳು ಮಕ್ಕಳ ಮುಂದಿನ ಕಲಿಕೆಗೆ ಅನುಕೂಲವಾಗುತ್ತವೆ. ಪ್ರತಿಯೊಂದು ಮಗುವಿನ ವ್ಯಕ್ತಿತ್ವ ನಿರ್ಮಾಣದಲ್ಲಿ ಪಾಲಕರು ಮತ್ತು ಶಿಕ್ಷಕರ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞ ಡಾ. ವಿುಲ್ ಕೋಳೆಕರ ಅಭಿಪ್ರಾಯಪಟ್ಟರು.
ಪಟ್ಟಣದ ಆರ್.ಎಂ. ಶಹಾ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಚಿಣ್ಣರಿಗೆ ಪದವಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ, ವಿಜೇತ ಮಕ್ಕಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ಆರ್.ಎಂ. ಶಹಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಿ.ಆರ್. ಶಹಾ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು.
ಈ ಚಿಣ್ಣರ ಪದವಿ ಪ್ರದಾನ ಕಾರ್ಯಕ್ರಮ ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗುತ್ತದೆ. ಅಲ್ಲದೆ ಮಕ್ಕಳು ಮೊಬೈಲ್ ಹಾಗೂ ಟಿವಿ ಬಳಕೆಯಿಂದ ದೂರವಿದ್ದು, ಒಳ್ಳೆಯ ಸಂಸ್ಕಾರ ಅಳವಡಿಕೊಳ್ಳುವ ಮೂಲಕ ಸಮಾಜದ ಮಾದರಿ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂದರು.
ಚಿಣ್ಣರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನಸೆಳೆದವು. ಪಾಲಕರು ಸಹ ತಮ್ಮ ಮಕ್ಕಳ ಪ್ರಗತಿಯ ಕುರಿತು ಸಂತಸ ವ್ಯಕ್ತಪಡಿಸಿದರು. 3 ರಿಂದ 5 ವರ್ಷದ ಮಕ್ಕಳಿಗಾಗಿ ನೃತ್ಯ, ಗಾಯನ, ಸ್ಲೋಕ, ಹಾಡು ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.
ಅತಿಥಿಗಳಾಗಿ ರೂಪಾ ಕಾಪ್ಸೆ, ಸಂಸ್ಥೆ ಆಡಳಿತಾಧಿಕಾರಿ ಕಲ್ಪನಾ ಶಹಾ, ಶೈಕ್ಷಣಿಕ ಮಾರ್ಗದರ್ಶಕ ನಜೀರ್ ಹುಂಡೇಕರ್, ಕಾಲೇಜು ವಿಭಾಗದ ಪ್ರಾಂಶುಪಾಲೆ ಪರವೀನ ಜಮಾದಾರ, ಶಾಲಾ ವಿಭಾಗದ ಪ್ರಾಂಶುಪಾಲ ಪ್ರಕಾಶ ಪಾಟೀಲ ಇತರರಿದ್ದರು.
ನರ್ಸರಿ, ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳು ನಿರೂಪಿಸಿದರು. ಶಿಕ್ಷಕಿ ವೈಷ್ಣವಿ ಜಗತಾಪ ವಂದಿಸಿದರು.