ಚಿಕ್ಕಮಗಳೂರು: ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನವಾಗಬೇಕಾದರೆ ಅವರಲ್ಲಿ ಶಿಕ್ಷಣ,ಕ್ರೀಡೆ, ಭಾಷಣ, ಸಂಗೀತ ಕಲೆ, ಸಾಹಿತ್ಯ, ವ್ಯಾಯಾಮ ಹೀಗೆ ಹತ್ತು ವಲವು ಕ್ಷೇತ್ರಗಳಲ್ಲಿ ಸರ್ವತೋಮುಖ ಬೆಳವಣಿಗೆಯಾಗಬೇಕು. ಇದಕ್ಕೆ ಬೇಸಿಗೆ ಶಿಬಿರಗಳು ಸಹಕಾರಿಯಾಗಿದ್ದು, ಪಾಲಕರು ತಮ್ಮ ಮಕ್ಕಳನ್ನು ಇಂಥ ಶಿಬಿರಗಳಿಗೆ ಸೇರಿಸಲು ಮುಂದೆ ಬರಬೇಕು ಎಂದು ಎಂಇಎಸ್ ಸಂಸ್ಥೆ ಗೌರವ ಕಾರ್ಯದರ್ಶಿ ಡಾ. ಡಿ.ಎಲ್.ವಿಜಯಕುಮಾರ್ ಅಭಿಪ್ರಾಯಪಟ್ಟರು.
ನಗರದ ಎಂಇಎಸ್ ಸಂಸ್ಥೆಯಿಂದ ಆಯೋಜಿಸಿದ್ದ ೧೭ನೇ ವರ್ಷದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲ ಶಾಲಾ ಕಾಲೇಜುಗಳಲ್ಲಿ ಇಂಥ ತರಬೇತಿ ಶಿಬಿರಗಳು ನಡೆದರೆ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮಕ್ಕಳು ಇಂಥ ಶಿಬಿರಗಳು ಎಲ್ಲೇ ನಡೆದರೂ ಅವುಗಳ ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ ಮಾತನಾಡಿ, ಕಳೆದ ೧೭ ವರ್ಷಗಳಿಂದ ಪ್ರತಿಭಾವಂತ ದೈಹಿಕ ಶಿಕ್ಷಣ ಶಿಕ್ಷಕರುಗಳ ಸಹಕಾರದಿಂದ ಮಲೆನಾಡು ವಿದ್ಯಾ ಸಂಸ್ಥೆ ಮಹತ್ವಪೂರ್ಣ ಬೇಸಿಗೆ ಶಿಬಿರ ಹಮ್ಮಿಕೊಂಡು ಬರುತ್ತಿದೆ. ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಮತ್ತು ವ್ಯಕ್ತಿತ್ವ ವಿಕಸನವನ್ನು ಹೆಚ್ಚಿಸಲು ಇಂಥ ಶಿಬಿರಗಳು ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕಿ ಶ್ರೀಲಕ್ಷ್ಮೀ, ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಕೆ.ಎನ್.ಮಂಜುನಾಥ್ ಭಟ್, ಪಿಎಂಎಲ್ವಿ ಬಾಲಿಕಾ ಪ್ರೌಢಶಾಲೆ ಪ್ರಭಾರಿ ಮುಖ್ಯ ಶಿಕ್ಷಕ ಜೆ.ಬಿ.ಸುರೇಶ್, ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಕುಮಾರ್, ಭಾಸ್ಕರ್, ರೂಪ ನಾಯಕ್, ಅನ್ಸರ್ ಶರೀಫ್ ಮತ್ತಿತರರಿದ್ದರು.