ಐನಾಪುರ: ಬೆಳಗಾವಿ ಜಿಲ್ಲೆಯಲ್ಲಿ ಕರೊನಾ ಸೋಂಕಿತರು ಕಂಡು ಬಂದಿರುವ ಕುಡಚಿ, ಹಿರೇಬಾಗೇವಾಡಿ ಹಾಗೂ ಸಂಕೇಶ್ವರ ಇವುಗಳನ್ನು ಹೊರತುಪಡಿಸಿ ಉಳೆದೆಲ್ಲ ಕಡೆ ಲಾಕ್ಡೌನ್ ಸಡಿಲಿಸುವ ಉದ್ದೇಶ ಹೊಂದಿದ್ದೇವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಇತ್ತೀಚೆಗೆ ನಿಧನರಾದ ಪಟ್ಟಣದ ಬಿಜೆಪಿ ಮುಖಂಡ ಶಿವಗೌಡ ಪಾರಶೆಟ್ಟಿ ಅವರ ಮನೆಗೆ ಭಾನುವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕರೊನಾ ಸೋಂಕಿತರು ಕಂಡು ಬಂದಿರುವ ಕುಡಚಿ, ಹಿರೇಬಾಗೇವಾಡಿ, ಸಂಕೇಶ್ವರ ಪಟ್ಟಣಗಳಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಿ, ಕರೊನಾ ವೈರಸ್ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾರಿಗೆ ಸಂಸ್ಥೆಗೆ ಕೋಟ್ಯಂತರ ರೂ. ನಷ್ಟ: ಲಾಕ್ಡೌನ್ನಿಂದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ಪ್ರತಿ ತಿಂಗಳು 397 ಕೋಟಿ ರೂ. ನಷ್ಟವಾಗುತ್ತಿದೆ. ಆದರೂ ಪ್ರತಿ ತಿಂಗಳು ಸಂಸ್ಥೆಯ ಸಿಬ್ಬಂದಿಗೆ ಸಂಬಳ ನೀಡಲಾಗುತ್ತಿದೆ. ಮೇ 4 ರಿಂದ ಗ್ರೀನ್ ಝೋನ್ ಇರುವ ಪ್ರದೇಶಗಳಲ್ಲಿ ಬಸ್ ಸಂಚಾರ ಪ್ರಾರಂಭಿಸಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು. ರೈತರು ಆತಂಕ ಪಡಬೇಕಿಲ್ಲ. ತಾವು ಬೆಳೆದ ಬೆಳೆಗಳನ್ನು ಸಾಗಿಸಲು ಗುರುತಿನ ಚೀಟಿ ಪಡೆಯುವ ಅವಶ್ಯಕತೆ ಇಲ್ಲ ಎಂದರು.
ನೀರಿನ ಸಮಸ್ಯೆ ಇಲ್ಲ: ಈ ಬಾರಿ ಕೃಷ್ಣಾ ನದಿಯಲ್ಲಿ 2.5 ಟಿಎಂಸಿ ನೀರು ಇದೆ. ನೀರು ಕಡಿಮೆ ಬಿದ್ದಲ್ಲಿ ಮಹಾರಾಷ್ಟ್ರದ ಸಿಎಂ ಜತೆಗೆ ಮಾತನಾಡಿ 4 ಟಿಎಂಸಿ ನೀರು ಬಿಡಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಅಮೋಘ ಖೊಬ್ರಿ, ಶ್ರೀಶೈಲ ನಾಯಿಕ, ಬಿಜೆಪಿ ಮಂಡಲದ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ಪ್ರಕಾಶ ಕೋರ್ಬು, ತಮ್ಮಣ್ಣ ಕಮತೆ, ಡಾ. ಎಂ.ಎಸ್. ಕಾರ್ಚಿ, ಅಣ್ಣಾಸಾಬ ಡೂಗನವರ, ಅಶೋಕ ಡಿಗ್ರಜ, ರಾವಸಾಬ ಚೌಗಲಾ ಇತರರು ಇದ್ದರು.