ನಾಯಕನಹಟ್ಟಿ: ಮನುಷ್ಯನಿಗೆ ಬೇಕಾದ ಶಾಂತಿ-ನೆಮ್ಮದಿಯನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ. ಅದು ಮಾರುಕಟ್ಟೆಯಲ್ಲಿ ಬಿಕರಿಯಾಗುವ ವಸ್ತುವಲ್ಲ ಎಂದು ಹೊಸದುರ್ಗ ಭಗೀರಥ ಪೀಠದ ಡಾ.ಪುರುಷೋತ್ತಮಾನಂದ ಸ್ವಾಮೀಜಿ ಹೇಳಿದರು.
ಸಮೀಪದ ತುರುವನೂರು ಹೋಬಳಿಯ ಬೆಳಗಟ್ಟದಲ್ಲಿ ಭಾನುವಾರ ಆಯೋಜಿಸಿದ್ದ ಸಮನ್ವಯ ಸದ್ಗುರು ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯವಹಿಸಿ, ಮಾತನಾಡಿದರು.
ಮನುಷ್ಯ ಇಂದು ಕೊಳ್ಳುಬಾಕ ಸಂಸ್ಕೃತಿ ಅನುಸರಿಸಿ, ಜೀವನಾವಶ್ಯ ಶಾಂತಿ-ನೆಮ್ಮದಿ, ಸಹಬಾಳ್ವೆಯನ್ನು ಮರೆತಿದ್ದಾನೆ. ಸುಖಜೀವನ ಸಾಗಿಸಲು ಅಗತ್ಯವಾಗಿ ಬೇಕಾಗಿರುವುದು. ಶಾಂತಿ-ನೆಮ್ಮದಿ. ಇದು ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಆದರೆ ಅತೀ ಬುದ್ಧಿವಂತ ಮನುಷ್ಯನಿಗೆ ಇದು ತಿಳಿಯದಿರುವುದು ವಿಷಾದಕರ. ಜೀವನ ಸಾಗಿಸಲು ಹಣಬೇಕಾಗಿದೆಯಾದರೂ ಇದರಿಂದ ಎಲ್ಲವನ್ನೂ ಕೊಳ್ಳಲು ಸಾಧ್ಯವಿಲ್ಲವೆಂಬ ಸತ್ಯ ಜಗತ್ತಿಗೆ ತಿಳಿಯಬೇಕು. ಭಕ್ತಿಯಿಂದ ಮುಕ್ತಿ ಎಂಬ ಭಾವನೆ ಮನುಷ್ಯರಲ್ಲಿ ಮೂಡಬೇಕು ಎಂದು ತಿಳಿಸಿದರು.
ಚಿತ್ರದುರ್ಗ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಹೆಮ್ಮರವೊಂದು ತನ್ನ ಸುತ್ತಲಿನ ಜೀವ-ಜಂತುಗಳಿಗೆ ಆಶ್ರಯ ನೀಡುವಂತೆ ಸಾಧನಾಶೀಲರಿಗೆ ಭದ್ರ ತಳಹದಿ ಹಾಕುತ್ತಿರುವ ಇಲ್ಲಿನ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯ ಸ್ವಾಮಿ ಮಠ ಕ್ರಿಯಾ ಕೇಂದ್ರವಾಗಿದೆ. ಭಕ್ತಿ ಮಾರ್ಗ ಸನ್ಮಾರ್ಗದ ಸಾಧನವಾಗಿದೆ. ಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರು ಉತ್ತಮ ವ್ಯಕ್ತಿಗಳಾಗಿದ್ದಾರೆೆಂದು ಅಭಿಪ್ರಾಯಪಟ್ಟರು.
ಮಠದ ಪೀಠಾಧ್ಯಕ್ಷೆ ಅಮ್ಮ ಮಹದೇವಮ್ಮ ಅಧ್ಯಕ್ಷತೆವಹಿಸಿದ್ದರು. ಕುವೆಂಪು ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಮತ್ತಿತರರಿದ್ದರು.