ವಿಜಯಪುರ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಪಾವತಿಸಲು ಲಂಚ ಪಡೆದ ಆರೋಪಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಇಲ್ಲಿನ ಅಲಿಯಾಬಾದ್ ಗ್ರಾಪಂನ ಪ್ರಭಾರಿ ಪಿಡಿಒ ಆಗಿದ್ದ ಅರವಿಂದ ಸೋಮಪ್ಪ ಮುಸಗೂರಿ, ಅಧ್ಯಕ್ಷೆಯ ಪತಿ ರಮೇಶ ವಾಲು ಲಮಾಣಿ ಹಾಗೂ ನಿಂಗರಾಜ ಗೌಡಪ್ಪ ಪಾಟೀಲ ಶಿಕ್ಷೆಗೆ ಗುರಿಯಾಗಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆ-2012ರಡಿ ಮಂಜೂರಾದ ಸಾರ್ವಜನಿಕ ಕುಡಿಯುವ ನೀರಿನ ಬಾವಿ ತೆಗೆಯುವ ಕಾಮಗಾರಿಯಲ್ಲಿ ಕೂಲಿ ಕೆಲಸ ಮಾಡಿದ ನೋಂದಾಯಿತ ಕೂಲಿಕಾರರಿಗೆ ಕೂಲಿ ಹಣವನ್ನು ಅವರ ಬ್ಯಾಂಕ್ ಖಾತೆಗೆ ಬಟವಡೆ ಮಾಡಲು ಪಿಡಿಒ 29 ಸಾವಿರ ಹಾಗೂ ಅಧ್ಯಕ್ಷೆ ಪತಿ 20 ಸಾವಿರ ಹೀಗೆ 49 ಸಾವಿರ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದರು. ಲಂಚದ ಮೊತ್ತವನ್ನು ನಿಂಗರಾಜ ಗೌರಪ್ಪ ಪಾಟೀಲ ಈತನ ಕೈಯಲ್ಲಿ ಕೊಡಿಸಿ ಕಳುಹಿಸುತ್ತಿದ್ದಾ 2012 ಮೇ 10ರಣದಯ ವಿಜಯಪುರ ತಾಪಂ ಕಚೇರಿ ಆವರಣದಲ್ಲಿ ಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದಿದ್ದರು.
ಸದರಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾರಾಯಣ ನಾಯಕ ಇವರು ಮೂವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಮೊದಲನೇ ಆರೋಪಿಯಾದ ಪ್ರಭಾರ ಪಿಡಿಒ ಅರವಿಂದ ಮುಸಗೂರಿಗೆ 1 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ.ದಂಡ, ಎರಡನೇ ಆರೋಪಿಗೆ 4 ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ.ದಂಡ, ಮೂರನೇ ಆರೋಪಿಗೆ 4 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ.ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅರ್ಜುನ ಎಸ್. ಮಿಸಾಳೆ ವಾದ ಮಂಡಿಸಿದ್ದರು. ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್ ರವೀಂದ್ರ ಎಂ. ಕುರಬಗಟ್ಟಿ ತನಿಖೆ ನಡೆಸಿದ್ದರೆಂದು ಪ್ರಕಟಣೆ ತಿಳಿಸಿದೆ.