ಪುತ್ತೂರು: ಶ್ವಾಸಕೋಶ ಸಮಸ್ಯೆಯಿಂದ ಚಿಂತಾಜನಕ ಸ್ಥಿತಿಯಲ್ಲಿರುವ ಸುಹಾನಾ ಎಂಬ ಯುವತಿಯ ಜೀವ ರಕ್ಷಣೆಗಾಗಿ ಬುಧವಾರ ಪುತ್ತೂರಿನ ಆಂಬುಲೆನ್ಸ್ ತಂಡ ಒಗ್ಗೂಡಿ ಇಲ್ಲಿನ ಮಹಾವೀರ ಆಸ್ಪತ್ರೆಯಿಂದ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಜೀರೋ ಟ್ರಾಫಿಕ್ನಲ್ಲಿ ಸಾಗಿಸಲಾಯಿತು.
ಚಿಂತಾಜನಕ ಸ್ಥಿತಿಯಲ್ಲಿರುವ ಸಕಲೇಶಪುರದ ಅರೇಹಳ್ಳಿ ಮೂಲದ ಸುಹಾನಾ(22) ಎಂಬಾಕೆಗೆ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿತ್ತು.
ಕ್ಷಣಕ್ಷಣಕ್ಕೂ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದರಿಂದ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ವೈಟ್ ಫೀಲ್ಡ್ನಲ್ಲಿರುವ ವೈದೇಹಿ ಆಸ್ಪತ್ರೆಗೆ ವರ್ಗಾಯಿಸಲು ವೈದ್ಯರು ನಿರ್ದೇಶಿಸಿದ್ದರು. ಈ ಸಂದರ್ಭ ಯುವತಿಯ ಜೀವ ರಕ್ಷಣೆಗಾಗಿ ಪುತ್ತೂರಿನ ಆಂಬುಲೆನ್ಸ್ ತಂಡ ಒಗ್ಗೂಡಿ ವಿಶೇಷ ಆಂಬುಲೆನ್ಸ್ ಮೂಲಕ ಜೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಕರೆದೊಯ್ಯಲಾಯಿತು.
ಪುತ್ತೂರು ಸಂಚಾರ ಪೊಲೀಸರು ನಗರ ವ್ಯಾಪ್ತಿಯಲ್ಲಿ ಆಂಬುಲೆನ್ಸ್ನ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಆಂಬುಲೆನ್ಸ್ ಸಾಗಿ ಬರುವ ರಸ್ತೆಯಲ್ಲಿ ಆಯಾ ಊರಿನ ನಾಗರಿಕರು ಹಾಗೂ ಸಂಘಟನೆಗಳ ಕಾರ್ಯಕರ್ತರು ಆಂಬುಲೆನ್ಸ್ ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟರು. ಮಹಾವೀರ ಆಸ್ಪತ್ರೆಯಿಂದ ಉಪ್ಪಿನಂಗಡಿ, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ, ಚಾರ್ಮಾಡಿ ಬನ್ಕಲ್ ಹ್ಯಾಂಡ್ಪೋಸ್ಟ್, ಗೋಣಿಬೀಡು, ಬೇಲೂರು, ಹಾಸನ, ಯಶವಂತಪುರ, ಹೆಬ್ಬಾಳ, ರಾಮಮೂರ್ತಿನಗರ, ಟಿನ್ಫ್ಯಾಕ್ಟರಿ, ಮಹದೇವಪುರ ಮಾರ್ಗವಾಗಿ ವೈದೇಹಿ ಆಸ್ಪತ್ರೆಗೆ ತೆರಳಲು ದಾರಿ ಮಾಡಿಕೊಡಲಾಯಿತು.